ಅಯೋಧ್ಯೆಯಲ್ಲಿ ರಾಮನ ದರ್ಶನ ಪಡೆದು ಕೊನೆಯುಸಿರೆಳೆದ ಉಡುಪಿಯ ಭಕ್ತ

Ram Mandir: ಉಡುಪಿಯ ಭಕ್ತರೊಬ್ಬರು ಅಯೋಧ್ಯೆಯಲ್ಲಿ ರಾಮನ ದರ್ಶನ ಪಡೆದ ಬೆನ್ನಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಉಡುಪಿ ಮಾರ್ಚ್‌ 10 : ರಾಮ ಮಂದಿರ (Ram Mandir) ಉದ್ಘಾಟನೆಯಾದ ಬಳಿಕ ರಾಮನ ದರ್ಶನ ಪಡೆಯಲು ದೇಶದ ವಿವಿಧೆಡೆಯಿಂದ ಕೋಟ್ಯಂತರ ಭಕ್ತರು ಅಯೋಧ್ಯೆಗೆ ತೆರಳುತ್ತಿದ್ದಾರೆ. ಈ ನಡುವೆ ರಾಮಲಲ್ಲಾ ದರ್ಶನ ಪಡೆಯಲು ಉಡುಪಿಯಿಂದ ತೆರಳಿದ್ದ ಭಕ್ತರೊಬ್ಬರು, ರಾಮನ ದರ್ಶನ ಪಡೆದು ಕೊನೆಯುಸಿರೆಳೆದಿರುವ ಘಟನೆ ನಡೆದಿದೆ.

ಉಡುಪಿಯ ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತ ಪಾಂಡುರಂಗ ಶಾನುಭೋಗ್ ಮೃತರು. ರಾಮಲಲ್ಲಾನ ಮಂದಿರಕ್ಕೆ ಹೋಗಬೇಕೆಂದು ಅಯೋಧ್ಯೆಗೆ ತೆರಳಿದ್ದ ಇವರು, ಬೆಳಗ್ಗೆ ರಾಮಲಲ್ಲಾನಿಗೆ ಕೈಮುಗಿದು, ಪೇಜಾವರ ಶ್ರೀಗಳಿಂದ ಕಲಶಾಭಿಷೇಕದ ಪ್ರಸಾದ ಪಡೆದಿದ್ದರು. ಮಧ್ಯಾಹ್ನ ಪಲ್ಲಕ್ಕಿ ಉತ್ಸವಕ್ಕೆ ಆಗಮಿಸುವ ವೇಳೆ ಹೃದಯಘಾತ ಸಂಭವಿಸಿ ಪಾಂಡುರಂಗ ಶಾನುಭೋಗ್ ನಿಧನರಾಗಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶಾನುಭಾಗ್‌ ಅವರು, ದೃಷ್ಟಿ ಇಲ್ಲದಿದ್ದರೂ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು.