ಕಾರವಾರ: ಮಂಗನಕಾಯಿಲೆಗೆ ಒಂದೇ ದಿನ ಇಬ್ಬರು ಸಾವು: ಕೆಎಫ್​ಡಿಯಿಂದ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆ

ಕಾರವಾರ, ಮಾರ್ಚ್​ 4: ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ದಾಪುರ ತಾಲೂಕಿನಲ್ಲಿ ಮಂಗನಕಾಯಿಲೆ (Monkey Fever) ಗೆ ಒಂದೇ ದಿನ ಇಬ್ಬರು ಸಾವನ್ನಪ್ಪಿದ್ದಾರೆ. ಹೆಗ್ಗೆಕೊಪ್ಪ ಗ್ರಾಮದ 88 ವರ್ಷದ ವೃದ್ಧ ಮತ್ತು ಸಿದ್ದಾಪುರ ತಾಲೂಕಿನ ಕಲ್ಲೂರು ಗ್ರಾಮದ 65 ವರ್ಷದ ವೃದ್ಧೆ ಮೃತರು. ಆ ಮೂಲಕ ಜಿಲ್ಲೆಯಲ್ಲಿ ಕೆಎಫ್​ಡಿಯಿಂದ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆ ಆಗಿದೆ. ಸರಣಿ ಸಾವಿನಿಂದ ಸಿದ್ದಾಪುರ, ಶಿರಸಿ ತಾಲೂಕಿನಲ್ಲಿ ಆತಂಕ ಹೆಚ್ಚಿದೆ. ಸೂಕ್ತ ಲಸಿಕೆ ಇಲ್ಲದೆ ಆರೋಗ್ಯ ಇಲಾಖೆ ಅಧಿಕಾರಿಗಳು ಪರದಾಡುವಂತಾಗಿದೆ.

ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆ ಮೃತ್ಯು ಮೃದಂಗ: ಮತ್ತೊಂದು ಸಾವು

ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆ ಮೃತ್ಯು ಮೃದಂಗ ಶುರು ಮಾಡಿದ್ದು, ಮಂಗನ ಕಾಯಿಲೆಗೆ ಕಾಫಿನಾಡಿನಲ್ಲಿ ಮೂರನೇ ಸಾವಾಗಿದೆ. 71 ವರ್ಷದ ಬಸವ ಪೂಜಾರಿ ಮೃತ ವ್ಯಕ್ತಿ. ಬಾಳೆಹೊನ್ನೂರು ಸಮೀಪದ ಮೇಲ್ಪಾಲ್ ಗ್ರಾಮದ ನಿವಾಸಿ. ತೀವ್ರ ಜ್ವರದಿಂದ ಬಳಲುತ್ತಿದ್ದ ಬಸವ ಪೂಜಾರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಕಳೆದ ಮೂರು ದಿನದ ಹಿಂದೆ KFD ಸೋಂಕಿರುವುದು ಪತ್ತೆಯಾಗಿತ್ತು. ರಾಜ್ಯದಲ್ಲೇ 8 ಜನರನ್ನ ಮಂಗನ ಕಾಯಿಲೆ ಬಲಿ ಪಡೆದಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ KFD ಹೆಚ್ಚುತ್ತಿದೆ. ಜಿಲ್ಲೆಯ 53 ಜನರಲ್ಲಿ KFD ಪತ್ತೆಯಾಗಿತ್ತು. 36 ಜನರು ಗುಣಮುಖ ‌,14 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಿಸಿಲ‌ತಾಪ ಹೆಚ್ಚಾದಂತೆ, ಮಲೆನಾಡು ಭಾಗದಲ್ಲಿ ಹೆಚ್ಚುತ್ತಿದೆ.

ಮಂಗನಕಾಯಿಲೆ ಪ್ರಕರಣಗಳು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನಿರ್ನಳ್ಳಿ ಗ್ರಾಮದ ರಸ್ತೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗನ ಮೃತ ದೇಹ ಪತ್ತೆ ಆಗಿದೆ. ಇದು ನಿರ್ನಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಸದ್ಯ ಮಲೆನಾಡಿನ ಜನ ಭಯದಲ್ಲೆ ಜೀವನ ಸಾಗಿಸುತ್ತಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಬರದಿಂದ ತತ್ತರಿಸಿ ರಾಜ್ಯದ ಜನರಿಗೆ ಕೃಷಿಯಲ್ಲಿ ನಷ್ಟ, ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿರುವ ಬೆನ್ನಲ್ಲೇ ಕೆಲ ವರ್ಷಗಳಿಂದ ತನ್ನಗಾಗಿದ್ದ ರೋಗಗಳು ಮತ್ತೆ ಉಲ್ಭಣಿಸುತ್ತಿವೆ. ಮಳೆನಾಡು ಭಾಗದಲ್ಲಿಕಳೆದ ಐದು ವರ್ಷಗಳಿಂದ ಕಾಡಿದ್ದ ಮಂಗನ ಕಾಯಿಲೆ ಇತ್ತೀಚೆಗೆ ಮತ್ತೆ ಎಂಟ್ರಿ ಕೊಟ್ಟಿತ್ತು. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪೂರ ತಾಲೂಕಿನ ಜಿಡ್ಡಿ ಗ್ರಾಮದ ವ್ಯಾಪ್ತಿಯ ಕಾಡಿನಲ್ಲಿ ಕಳೆದ 15 ದಿನಗಳ ಹಿಂದೆ ಚರ್ಮ ರೋಗದಿಂದ ಮಂಗ ಸಾವನಪ್ಪಿದ್ದರು. ಅದರ ಅಂತ್ಯಕ್ರಿಯೆ ಮಾಡದೆ ಹಾಗೆ ಇದ್ದಿದ್ದರಿಂದ. ಅದರ ಉಣ್ಣೆಯಿಂದ ಬಂದ ವೈರಸ್ ಜಿಡ್ಡಿ ಗ್ರಾಮದ ಸುತ್ತಮುತ್ತಲು ಪಸರಿಸಲು ಆರಂಭಿಸಿತ್ತು.

ಇದುವರೆಗೂ 47 ಜನರಲ್ಲಿ ಮಂಗನ ಕಾಯಿಲೆ ಪತ್ತೆ ಆಗಿದೆ. 24 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 13 ಜನ ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗ ಅಂಟಿದ 37 ಜನರು ಔಟ್ ಆಫ್ ಡೆಂಜರ್ ಇದ್ದಾರೆ.

ರೋಗ ಕಾಣಿಸಿಕೊಂಡಿರುವವರ ಪೈಕಿ ಸದ್ಯ ಯಾರಿಗೂ ಪ್ರಾಣಾಪಾಯ ಇಲ್ಲ. ಆದರೆ ಈಗ ಬಂದವರಲ್ಲಿ ಮತ್ತೆ ರೋಗ ಕಾಣಿಸಿಕೊಂಡರೆ, ತಿವ್ರ ಜ್ವರಕ್ಕೆ ತುತ್ತಾಗಿ ರಕ್ತಸ್ರಾವ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ರೋಗ ಬರದಂತೆ ಮುಂಜಾಗೃತೆ ಕ್ರಮ ಕೈಗೊಳ್ಳುವುದು ಭಾರಿ ಅವಶ್ಯಕ ಎಂದು ಉತ್ತರ ಕನ್ನಡ ಜಿಲ್ಲಾಆರೋಗ್ಯಧಿಕಾರಿ ಹೇಳಿದ್ದರು.