ಯಲ್ಲಾಪುರದ ಕರಡಿಪಾಲ್ ನಲ್ಲಿ ಇಬ್ಬನಿ ಫೌಂಡೇಷನ್ ಮಾಗೋಡ & ಜನಪ್ರಿಯ ಟ್ರಸ್ಟ್ ಕಂಚನಳ್ಳಿ ಇವರ ಆಶ್ರಯದಲ್ಲಿ ಹಮ್ಮಿಕೊಂಡ ‘ಯಕ್ಷವೃಕ್ಷ-2024’ ಕಾರ್ಯಕ್ರಮ

ಯಲ್ಲಾಪುರ: ಕಲೆಯನ್ನು ಉಳಿಸಿ, ಬೆಳೆಸುವುದಕ್ಕೆ ಕ್ರಿಯಾಶೀಲ ಸಂಘಟನೆಗಳು, ಕಲಾವಿದರು ಹಾಗೂ ಕಲಾಭಿಮಾನಿಗಳು ಒಟ್ಟಾದಾಗ ಮಾತ್ರ ಸಾಧ್ಯ ಎಂದು ಟಿಎಂಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.
ಅವರು ತಾಲೂಕಿನ ಕರಡಿಪಾಲ್ ನಲ್ಲಿ ಇಬ್ಬನಿ ಫೌಂಡೇಷನ್ ಮಾಗೋಡ ಹಾಗೂ ಜನಪ್ರಿಯ ಟ್ರಸ್ಟ್ ಕಂಚನಳ್ಳಿ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಯಕ್ಷವೃಕ್ಷ-2024’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನದಂತಹ ಶ್ರೇಷ್ಠ ಕಲೆಯನ್ನು ಜೀವಂತವಾಗಿರಿಸಿಕೊಳ್ಳುವುದು ನಮ್ಮ‌ ಹೊಣೆ. ಕಲಾ ಸೇವೆಗೆ ಶ್ರಮಿಸುತ್ತಿರುವ ಸಂಘಟನೆಗಳೊಂದಿಗೆ ಕಲಾಭಿಮಾನಿಗಳು ಕೈಜೋಡಿಸಬೇಕೆಂದರು.
ತಾಳಮದ್ದಲೆ ಅರ್ಥಧಾರಿ ನರಸಿಂಹ ಭಟ್ಟ ಕುಂಕಿಮನೆ ಹಾಗೂ ಪ್ರಸಿದ್ಧ ಚಂಡೆವಾದಕ ಪ್ರಮೋದ ಹೆಗಡೆ ಕಬ್ಬಿನಗದ್ದೆ ಅವರನ್ನು ಸನ್ಮಾನಿಸಲಾಯಿತು. ಡಾ.ಶಿವರಾಮ ಭಾಗ್ವತ ಮಣ್ಕುಳಿ ಅಭಿನಂದನಾ ಮಾತನಾಡಿದರು. ಯಕ್ಷವೃಕ್ಷ ಅಭಿಯಾನಕ್ಕೆ ಪತ್ರೆ ಗಿಡ ನೀಡಿ ಚಾಲನೆ ನೀಡಲಾಯಿತು.
ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ ಅಧ್ಯಕ್ಷತೆ ವಹಿಸಿದ್ದರು. ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ, ಗ್ರಾ.ಪಂ ಅಧ್ಯಕ್ಷೆ ಭವಾನಿ ಸಿದ್ದಿ, ಸದಸ್ಯ ಟಿ.ಆರ್.ಹೆಗಡೆ, ಪತ್ರಕರ್ತ ನರಸಿಂಹ ಸಾತೊಡ್ಡಿ, ಶ್ರೀನಿವಾಸ ಕೋಡ್ನಗುಡ್ಡೆ, ಎನ್.ಎಂ.ಹೆಗಡೆ ಹಾದಿಮನೆ, ಗಜಾನನ ಕೋಣೆಮನೆ ಇತರರಿದ್ದರು.
ಸುಬ್ಬಣ್ಣ ಕಂಚಗಲ್ ಸ್ವಾಗತಿಸಿದರು. ಇಬ್ಬನಿ ಫೌಂಡೇಷನ್ ಅಧ್ಯಕ್ಷ ವಿ.ಎನ್.ಹೆಗಡೆ ಹಾದಿಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಪ್ರಿಯ ಟ್ರಸ್ಟ್ ಅಧ್ಯಕ್ಷ ಮಹೇಶ ಭಟ್ಟ ಕಂಚನಳ್ಳಿ ಸಂದೇಶ ವಾಚಿಸಿದರು. ಮಂಜುನಾಥ ಜೋಶಿ ನಿರ್ವಹಿಸಿದರು.
ನಂತರ ಪ್ರಸಿದ್ಧ ಕಲಾವಿದರಿಂದ ಮಾರುತಿ ಪ್ರತಾಪ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಸುರೇಶ ಶೆಟ್ಟಿ, ಅನಂತ ಹೆಗಡೆ ದಂತಳಿಗೆ, ಮದ್ದಲೆವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ, ಚಂಡೆವಾದಕರಾಗಿ ಪ್ರಮೋದ ಹೆಗಡೆ ಕಬ್ಬಿನಗದ್ದೆ ಭಾಗವಹಿಸಿದ್ದರು.
ಕೃಷ್ಣನಾಗಿ ಗೋಪಾಲ ಆಚಾರಿ ತೀರ್ಥಹಳ್ಳಿ, ಬಲರಾಮನಾಗಿ ಭಾಸ್ಕರ ಗಾಂವ್ಕರ ಬಿದ್ರೆಮನೆ, ಸತ್ಯಭಾಮೆಯಾಗಿ ಸದಾಶಿವ ಮಲವಳ್ಳಿ, ಹಾಸ್ಯ ಪಾತ್ರದಲ್ಲಿ ಶ್ರೀಧರ ಭಟ್ಟ ಕಾಸರಕೋಡ, ಹನುಮಂತನಾಗಿ ಶಶಾಂಕ ಪಟೇಲ, ನಾರದನಾಗಿ ಮಂಜುನಾಥ ಹೆಗಡೆ ಹಿಲ್ಲೂರು, ಸಖಿಯಾಗಿ ದೀಪಕ ಭಟ್ಟ ಕುಂಕಿ ಪಾತ್ರ ನಿರ್ವಹಿಸಿದರು.