ಯಲ್ಲಾಪುರದ ಹಸರಪಾಲಿನಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ 10 ದಿನಗಳ ತಾಳಮದ್ದಳೆ ತರಬೇತಿ. ವಿಜಯದಶಮಿಯಂದು ತಾಳಮದ್ದಳೆ ಪ್ರಸ್ತುತಪಡಿಸಿದ ಮಕ್ಕಳು.


ಯಲ್ಲಾಪುರ:-
ಆನಗೋಡ ಸಮೀಪ ಹಸರಪಾಲಿನಲ್ಲಿ ದಸರಾ ರಜೆಯ ಸಂದರ್ಭದಂದು ಶಾಲಾ ವಿದ್ಯಾರ್ಥಿಗಳಿಗಾಗಿ ಯಕ್ಷ ಸಂಸ್ಕೃತಿ ಪರಿವಾರ ಸಂಘಟನೆಯ ಮೂಲಕ ತಾಳಮದ್ದಲೆ ತರಬೇತಿ ವರ್ಗ ನಡೆಯಿತು.‌10 ದಿನಗಳ ಕಾಲ ತಾಳಮದ್ದಲೆ ಅರ್ಥಗಾರಿಕೆಯ ತರಬೇತಿ ಪಡೆದ ಮಕ್ಕಳು, ವಿಜಯ ದಶಮಿಯ ದಿನದಂದು ತಾಳಮದ್ದಲೆಯ ಮೂಲಕ ರಂಗ ಪ್ರವೇಶ ಮಾಡಿದ್ರು. ಅರ್ಥಧಾರಿ ನರಸಿಂಹ ಭಟ್ಟ ಕುಂಕಿಮನೆ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಧ್ರುವ ಚರಿತ್ರೆ ಹಾಗೂ ವಾಲಿ ಮೋಕ್ಷ ತಾಳಮದ್ದಲೆ ಪ್ರಸ್ತುತಪಡಿಸಿದ್ರು.

ಇದಕ್ಕೂ ಮುನ್ನ ರಂಗ ಪ್ರವೇಶ ಕಾರ್ಯಕ್ರಮವನ್ನು ಉದ್ಘಾಟಿಸಿದ ಟಿಎಂಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ರಜಾ ದಿನಗಳಲ್ಲಿ ಮೊಬೈಲ್, ಟಿವಿಗಳಲ್ಲೇ ಸಮಯ ಕಳೆಯುವುದನ್ನು ತಪ್ಪಿಸಿ, ಇಂತಹ ಸಂಸ್ಕಾರಯುತ ಕಲೆಯ ತರಬೇತಿ ನೀಡುವುದಕ್ಕೆ ಮುಂದಾಗಿರುವುದು ಉತ್ತಮ ಕಾರ್ಯ ಎಂದು ಹೇಳಿದ್ರು..

ಭಾಗವತರಾಗಿ ಮಹಾಬಲೇಶ್ವರ ಭಟ್ಟ ಬೆಳಶೇರ, ಮದ್ದಲೆವಾದಕರಾಗಿ ಸುಬ್ರಾಯ ಭಟ್ಟ ಗಾಣಗದ್ದೆ ಸಹಕರಿಸಿದ್ರು. ಮಕ್ಕಳಿಗೆ ತರಬೇತಿ ನೀಡಿದ ನರಸಿಂಹ ಭಟ್ಟ ಅವರನ್ನು ಸಂಘಟನೆ ಪರವಾಗಿ ಮಹೇಶ ಭಟ್ಟ ಗೌರವಿಸಿದ್ರು..

ಶ್ರೀಧರ್‌ ಅಣಲಗಾರ್‌, ನುಡಿಸಿರಿ ನ್ಯೂಸ್‌, ಯಲ್ಲಾಪುರ.