ಸಿಂಗರಗಾವ್’ನಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ಜಾನುವಾರುಗಳ ಪ್ರದರ್ಶನ

ಜೋಯಿಡಾ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ವಿಸ್ತರಣಾ ಕೇಂದ್ರ ಜೋಯಿಡಾ ಮತ್ತು ಪಶು ಸಂಗೋಪನಾ ಇಲಾಖೆ ಜೋಯಿಡಾ, ಗ್ರಾಮ ಪಂಚಾಯತ್ ಸಿಂಗರಗಾವ್ ಇವರ ಸಂಯುಕ್ತ ಆಶ್ರಯದಡಿ ಸಿಂಗರಗಾವ್‌ನಲ್ಲಿ ಹಮ್ಮಿಕೊಂಡಿದ್ದ ಜಾನುವಾರುಗಳ ಪ್ರದರ್ಶನ ಕಾರ್ಯಕ್ರಮವು ಬುಧವಾರ ಯಶಸ್ವಿಯಾಗಿ ಸಂಪನ್ನಗೊಂಡಿತು.

ಕಾರ್ಯಕರ್ಮದಲ್ಲಿ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ :ಪಿ ಎಸ್.ಮಂಜಪ್ಪ ಅವರು ಜಾನುವಾರುಗಳು ರೈತನ‌ ಮೂಲ ಆಧಾರ. ಜಾನುವಾರುಗಳ ಸಾಕಾಣಿಕೆಯಿಂದ ಕೃಷಿ ಚಟುವಟಿಕೆಯ ಜೊತೆಗೆ ನಮ್ಮ ಆರೋಗ್ಯವು ವೃದ್ಧಿಯಾಗುತ್ತದೆ. ಜಾನುವಾರುಗಳ‌ ಸಮರ್ಪಕ ಸಾಕಾಣಿಕೆಯ ಬಗ್ಗೆ ಅರಿವನ್ನು ಮೂಡಿಸಲು ಇಂಥಹ ಕಾರ್ಯಕ್ರಮ ಉಪಯುಕ್ತವಾಗಿದೆ.

ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾಮ್ ಮೆಂಡೋಸ್, ಉಪಾಧ್ಯಕ್ಷೆ ಲಕ್ಷ್ಮಿ ಗಂಗಾರಾಮ್ ಶೇಳಕೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯ ಯೋಜನಾ ಸಂಯೋಜಕರಾದ ವಿನಾಯಕ ಚವ್ಜಾಣ್ ಅವರು ಮಾತನಾಡಿ, ಸಂಸ್ಥೆಯು ಉತ್ತಮ ತಳಿಯ ಹಾಗೂ ಉತ್ತಮ‌ ರೀತಿಯಲ್ಲಿ ಪಶುಗಳನ್ನು ಸಾಕಿದ ರೈತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ವಿತರಿಸಿ ರೈತರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದೆ ಎಂದರು.

ಸಂಸ್ಥೆಯ ಯೋಜನಾಧಿಕಾರಿ ಅಶೋಕ ಸೂರ್ಯವಂಶಿ ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿದರು. ಕ್ಷೇತ್ರ‌ ಮೇಲ್ವಿಚಾರಕರುಗಳಾದ ಸಂತೋಷ ಮೋರಿ ವಂದಿಸಿದರು. ನಾರಾಯಣ ವಾಡ್ಕರ್ ಕಾರ್ಯಕ್ರಮವನ್ನು ನಿರೂಪಿಸಿದರು.

ಅತ್ಯುತ್ತಮ ಜಾನುವಾರುಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ‌ ನೀಡಲಾಯ್ತು. ಭಾಗವಹಿಸಿದ ಎಲ್ಲ ರೈತರಿಗೆ ಸಮಾಧಾನಕರ ಬಹುಮಾನದ ಜೊತೆಗೆ ಎಲ್ಲ ಭಾಗವಹಿಸಿದ ಪಶುಗಳಿಗೆ ಹಿಂಡಿ ಚೀಲಗಳನ್ನು ವಿತರಿಸಲಾಯಿತು.

ಹಿರಿಯ ಪಶು ವೈದ್ಯಧಿಕಾರಿ ಬಾಳೆಕುಂದ್ರಿ, ವಿನಾಯಕ್ ಮೊರ್ಲೆಕರ್, ಸೋನಾಲಿ ಹರಿಜನ್, ವಿಶ್ವಜೀತ ಮೊದಲಾದವರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಒಟ್ಟು 100 ಕ್ಕೂ ಅಧಿಕ ಬೇರೆ ಬೇರೆ ತಳಿಯ ಜಾನುವಾರುಗಳು ಬಾಗವಹಿಸಿದ್ದವು.