ಜೋಯಿಡಾದ ತಾಲ್ಲೂಕು ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ಉಚಿತ ಬೃಹತ್ ಅರೋಗ್ಯ ತಪಾಸಣಾ ಶಿಬಿರ

ಜೋಯಿಡಾ : ಜೋಯಿಡಾ ತಾಲ್ಲೂಕು ಆಸ್ಪತ್ರೆಯಲ್ಲಿ ಶ್ರೀ.ವಿ.ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ, ಕೆ.ಎಲ್.ಇ ವಿಶ್ವವಿದ್ಯಾಲಯ, ಡಾ : ಪ್ರಭಾಕರ್ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ, ಜೆ, ಎನ್, ಮೆಡಿಕಲ್ ಕಾಲೇಜು ಬೆಳಗಾವಿ, ತಾಲ್ಲೂಕು ಆಸ್ಪತ್ರೆ ಜೋಯಿಡಾ ಮತ್ತು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಸಹಯೋಗದೊಂದಿಗೆ, ಉಚಿತ ಅರೋಗ್ಯ ತಪಾಸಣೆಯ ಬೃಹತ್ ಶಿಬಿರವು ಮಂಗಳವಾರ ಯಶಸ್ವಿಯಾಗಿ ಸಂಪನ್ನಗೊಂಡಿತು.

ಶಿಬಿರವನ್ನು ಕೆ.ಎಲ್.ಇ ಸಂಸ್ಥೆಯ ಆಡಳಿತಾಧಿಕಾರಿ ಡಾ : ಅಲ್ಲಮಪ್ರಭು ಅವರು ಉದ್ಘಾಟಿಸಿ ಮಾತನಾಡುತ್ತಾ, ಆರೋಗ್ಯವಿದ್ದರೆ ಎಲ್ಲವನ್ನೂ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಆರೋಗ್ಯ ರಕ್ಷಣೆಗೆ ಹೆಚ್ಚಿನ ಕಾಳಜಿಯನ್ನು ನೀಡಬೇಕು. ಇಂತಹ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರಗಳ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳುವುದರ ಮೂಲಕ ಸದೃಢ ಆರೋಗ್ಯವಂತರಾಗಬೇಕೆಂದು ಕರೆ‌ ನೀಡಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕುಣಬಿ ಸಮಾಜದ ಅಧ್ಯಕ್ಷರಾದ ಸುಭಾಷ್ ಗಾವಡಾ ಅವರು ಮಾತನಾಡಿ ಶ್ರೀ.ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಾಗೂ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯು ಜನಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನಪ್ರೀತಿಗೆ ಪಾತ್ರವಾಗಿದೆ ಎಂದರು.

ಮುಖ್ಯ ಅಥಿತಿಗಳಾಗಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಿಜಯಕುಮಾರ್ ಕೊಚ್ಚರಗಿ, ಮಾಜಿ ಜಿ.ಪಂ ಸದಸ್ಯ ರಮೇಶ ನಾಯ್ಕ, ತಾಲೂಕು ಆರೋಗ್ಯ ರಕ್ಷಾ ಸಮಿತಿಯ ಸದಸ್ಯರುಗಳಾದ ದತ್ತಾ ದೇಸಾಯಿ, ಭವಾನಿ.ಎನ್.ಚವ್ಹಾಣ್ ಭಾಗವಹಿಸಿದ್ದರು.

ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಯೋಜನಾಧಿಕಾರಿ ಅಶೋಕ ಸೂರ್ಯವಂಶಿ ಸ್ವಾಗತಿಸಿದರು. ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ‌ ಚೌವ್ಹಾಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಮೇಲ್ವಿಚಾರಕರುಗಳಾದ ಸಂತೋಷ ಮೋರಿ ವಂದಿಸಿದರು. ನಾರಾಯಣ ವಾಡಕರ ಕಾರ್ಯಕ್ರಮ ನಿರೂಪಿಸಿದರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಕ್ಷೇತ್ರ‌ಮೇಲ್ವಿಚಾರಕರುಗಳಾದ ಅಂದನಪ್ಪಾ ಅಂಗಡಿ, ಮನೋಹರ್ ಚವರಿಯವರ, ವಿಷ್ಣು ಮಡಿವಾಳ, ಸಂತೋಷ ಶಿದ್ನೇಕೊಪ್ಪ, ಮಹಾಂತೇಶ ಪೈಲೇಟ್ ಸಹಕರಿಸಿದರು.

ಶಿಬಿರದಲ್ಲಿ ಕೆ.ಎಲ್.ಇ ಆಸ್ಪತ್ರೆ ಹಾಗೂ ಡಾ. ಪ್ರಭಾಕರ್ ಕೋರೆ ಆಸ್ಪತ್ರೆಯ ತಜ್ಞ ವೈದ್ಯರುಗಳು ಭಾಗವಹಿಸಿ ಆರೋಗ್ಯ ತಪಾಸಣೆಯನ್ನು ನಡೆಸಿಕೊಟ್ಟರು.