ಉಪ ವಲಯಾರಣ್ಯಾಧಿಕಾರಿ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟು ಸಿಕಂದರ್ ಜಮಾದಾರ್ ವಿಧಿವಶ

ಹಳಿಯಾಳ : ತಾಲ್ಲೂಕಿನ ಸಾಂಬ್ರಾಣಿ ನಿವಾಸಿ ಹಾಗೂ ಕಾರವಾರ ವಿಭಾಗದ ಉಪ ವಲಯಾರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಿಕಂದರ್.ಐ.ಜಮಾದಾರ್ ಅವರು ಸೋಮವಾರ ವಿಧಿವಶರಾದರು. ಮೃತರಿಗೆ 41 ವರ್ಷ ವಯಸ್ಸಾಗಿತ್ತು. ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ಗಮನ ಸೆಳೆದಿದ್ದರು.

ಕಳೆದ ನಾಲ್ಕು ದಿನಗಳ ಹಿಂದೆ ಗುಲ್ಬರ್ಗದಲ್ಲಿ ನಡೆದ ರಾಜ್ಯ ಮಟ್ಟದ ಅರಣ್ಯ ಅಧಿಕಾರಿಗಳ /ಸಿಬ್ಬಂದಿಗಳ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಸಂದರ್ಭ ಸಿಕಂದರ್ ‌ಜಮಾದಾರ್ ಅವರು ಹಟಾತ್ತನೆ ಕುಸಿದು ಬಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ವಿಧಿವಶರಾದರು.

ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಅವರ ಹುಟ್ಟೂರಾದ ಸಾಂಬ್ರಾಣಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಅತ್ಯುತ್ತಮ ಕ್ರೀಡಾಪಟುವಾಗಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಸಿಕಂದರ್ ಜಮಾದಾರ್ ಅವರ ಅಕಾಲಿಕ‌ ನಿಧನಕ್ಕೆ ತಾಲ್ಲೂಕಿನ ಗಣ್ಯರನೇಕರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಕಂಬನಿಯನ್ನು‌ ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ.