ಶಾಸಕ ಜನಾರ್ದನ ರೆಡ್ಡಿ ಕುಟೀರಕ್ಕೆ ಬೆಂಕಿ; ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರಬಹುದು ಎಂದ ಬೆಂಬಲಿಗರು

ಕೊಪ್ಪಳ, ಡಿ.27: ಕೆಆರ್​ಪಿಪಿ ಪಕ್ಷ ದ ಅಧ್ಯಕ್ಷ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಕುಟೀರಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಹೊತ್ತಿ ಉರದಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪಂಪಾ ಸರೋವರದಲ್ಲಿ ನಡೆದಿದೆ. ಐತಿಹಾಸಿಕ ಪಂಪಾ ಸರೋವರದಲ್ಲಿ ಶಾಸಕ ಜನಾರ್ದನ ರೆಡ್ಡಿ ಅವರು ಕೆಲ ವರ್ಷಗಳ ಹಿಂದೆ ಬಂದಾಗ, ತಾವು ಉಳಿದುಕೊಳ್ಳಲೆಂದೆ ಕುಟೀರವೊಂದನ್ನು ನಿರ್ಮಾಣ ಮಾಡಿಸಿದ್ದರು.

ಅಂಜನಾದ್ರಿ, ಪಂಪಾ ಸರೋವರಕ್ಕೆ ಬಂದಾಗ ಜನಾರ್ದನ ರೆಡ್ಡಿ ಮತ್ತು ಅವರ ಕುಟುಂಬ ಇದೇ ಕುಟಿರದಲ್ಲಿ ವಾಸ್ತವ್ಯ ಮಾಡುತ್ತಿತ್ತು. ಕುಟಿರದೊಳಗೆ ಎಸಿ ಸೇರಿದಂತೆ ಆಧುನಿಕ ಅನೇಕ ಸೌಕರ್ಯಗಳು ಇದ್ದವು. ಆದರೆ ಇಂದು ಮಧ್ಯಾಹ್ನ ಹನ್ನೆರಡು ಗಂಟೆ ಸಮಯದಲ್ಲಿ ಕುಟಿರಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕುಟಿರ ಸುಟ್ಟು ಭಸ್ಮವಾಗಿದೆ. ಕುಟಿರದ ಮೇಲೆ ಹುಲ್ಲಿನ ಹೊದಿಕೆ ಹೊದೆಸಲಾಗಿತ್ತು. ಹೀಗಾಗಿ ಬೆಂಕಿ ಇಡೀ ಕುಟಿರವನ್ನು ಆವಸರಿಸಿಕೊಂಡಿದ್ದರಿಂದ ಕುಟಿರ ಅಗ್ನಿಗಾಹುತಿಯಾಗಿದೆ.

ಇನ್ನು ಶಾರ್ಟ್ ಸರ್ಕೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಅಂತ ಹೇಳಲಾಗುತ್ತಿದೆ. ಆದರೆ ಶಾಸಕ ರೆಡ್ಡಿ ಬೆಂಬಲಿಗರು ಯಾರೋ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರಬಹುದು ಅನ್ನೋ ಸಂಶಯ ವ್ಯಕ್ತಪಡಿಸಿದ್ದಾರೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸೋ ಕೆಲಸ ಮಾಡಿದ್ರು. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಇದು ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿರುವದಾ ಅಥವಾ ದುಷ್ಕರ್ಮಿಗಳ ಕೃತ್ಯವಾ ಅನ್ನೋ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.