ಮಹಿಳಾ ಪಿಸಿ CDR ಕಳ್ಳತನ ಕೇಸ್​​: ಪೊಲೀಸರೇ ಈ ರೀತಿ ಮಾಡಿದ್ದು ತಪ್ಪು: ಸಚಿವ ಜಿ ಪರಮೇಶ್ವರ್​

ಕಲಬುರಗಿ, ಡಿಸೆಂಬರ್​ 27: ಮಹಿಳಾ ಪಿಸಿ ಸಿಡಿಆರ್​​ ಕಳ್ಳತನ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದೇವೆ. ಪೊಲೀಸರೇ ಈ ರೀತಿ ಮಾಡಿದ್ದು ತಪ್ಪು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್  ಹೇಳಿದ್ದಾರೆ. ನಗರದಲ್ಲಿ  ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಸಿಡಿಆರ್ ಕದ್ದ ಆರೋಪದ ಮೇಲೆ ಇಬ್ಬರು ಕಾನ್ಸ್​ಟೇಬಲ್ಸ್​ ಅಮಾನತು ಮಾಡಲಾಗಿದೆ. ಸಿಡಿಆರ್ ಖಾಸಗಿ ವ್ಯಕ್ತಿಗೆ ನೀಡಿರುವ ಪ್ರಕರಣದ ಬಗ್ಗೆ ಚರ್ಚಿಸಿದ್ದೇನೆ‌ ಎಂದು ಹೇಳಿದ್ದಾರೆ.

ಈ ಕುರಿತು ಸಮಗ್ರ ತನಿಖೆ ನಡೆಸಲು ಸೂಚಿಸಿದ್ದೇನೆ. ಈ ರೀತಿ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈಶಾನ್ಯ ವಲಯ ಐಜಿಪಿ ವಿಭಾಗದ ಪೊಲೀಸ್ ಸಭೆ ಮಾಡಿದ್ದೇನೆ. ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆ ಎಸ್ಪಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಈ ಭಾಗದಲ್ಲಿ ಕ್ರೈಂ ರೇಟ್ ಕಂಟ್ರೋಲ್, ಕಾನೂನು ಸುವ್ಯವಸ್ಥೆ, ಡ್ರಗ್ಸ್ ಕಂಟ್ರೋಲ್ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದರು.

ಇದನ್ನೆಲ್ಲಾ ಬಿಗಿ ಮಾಡುವುದೇ ನನ್ನ ಕೆಲಸ ಅಲ್ವಾ

ಕಲಬುರಗಿ ಸೆಂಟ್ರಲ್ ಜೈಲು ಕರ್ಮಕಾಂಡ ವಿಚಾರವಾಗಿ ಮಾತನಾಡಿದ ಅವರು, ಜೈಲಿನ ಅಕ್ರಮದ ಬಗ್ಗೆ ಆಗಿರುವ ತನಿಖಾ ವರದಿ ಪಡೆದುಕೊಳ್ಳುತ್ತೇನೆ. ಬಂಧಿಖಾನೆ ಅಧಿಕಾರಿಗಳೇ ಬೇರೆ ಇದ್ದಾರೆ, ಅವರು ಸಭೆಗೆ ಬಂದಿಲ್ಲ. ನಾವು ಕೇಂದ್ರ ಕಚೇರಿಯಿಂದಲೇ ಮಾನಿಟರ್ ಮಾಡುತ್ತಿದ್ದೇವೆ. ಇದನ್ನೆಲ್ಲಾ ಬಿಗಿ ಮಾಡುವುದೇ ನನ್ನ ಕೆಲಸ ಅಲ್ವಾ ಎಂದು ಹೇಳಿದ್ದಾರೆ.

ಜೈಲುಗಳ ಅಕ್ರಮಕ್ಕೆ ಕಡಿವಾಣ ಹಾಕಲು ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಅತ್ಯಾಧುನಿಕ ಟೆಕ್ನಿಕಲ್​ ಉಪಕರಣ, ಸಿಸಿಟಿವಿ ಅಳವಡಿಸಬೇಕಿದೆ. ಅದನ್ನ ನಮ್ಮ ಇಲಾಖೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಅಕ್ರಮ ತಡೆಯೋದಕ್ಕೆ ಸೆಂಟ್ರಲ್ ಕಂಟ್ರೋಲ್ ಸಿಸ್ಟಮ್ ಮಾಡಬೇಕು ಅಂತ ಯೋಚನೆ ಮಾಡಿದ್ದೆವೆ ಎಂದು ತಿಳಿಸಿದ್ದಾರೆ.