ಕಾಂಗ್ರೆಸ್​ಗೆ ವ್ಯಾಕರಣ ಪಾಠ ಮಾಡಿದ ಸಂಸದ ಪ್ರತಾಪ್ ಸಿಂಹ: ಟ್ವೀಟ್​ ಮೂಲಕ ತಿರುಗೇಟು

ಬೆಂಗಳೂರು, ಡಿಸೆಂಬರ್​ 27: ಕಾಂಗ್ರೆಸ್ಸಿಗರೇ, ಬೇರೆಯವರಿಗೆ ಏಕವಚನ, ಬಹುವಚನ ಮತ್ತು ವ್ಯಾಕರಣದ ಪಾಠ ಹೇಳುವ ಮೊದಲು ಸ್ವತಃ ತಿದ್ದಿಕೊಳ್ಳಿ ಎಂದು ಕಾಂಗ್ರೆಸ್​ಗೆ ಸಂಸದ ಪ್ರತಾಪ್ ಸಿಂಹ (Pratap Simha) ಕೌಂಟರ್ ನೀಡಿದ್ದಾರೆ. ಸಿದ್ಧರಾಮಯ್ಯರ ಪೋಸ್ಟ್ ಹಾಗೂ ಕಾಂಗ್ರೆಸ್ ಪೋಸ್ಟ್​ಗೆ ಟ್ವೀಟ್​ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. ಪ್ರಧಾನಿಯನ್ನ ಮಿಸ್ಟರ್ ಮೋದಿ ಎಂದು ಬರೆದಿರುವ ಅಣ್ಣ ನಾಡಕಳ್ಳ, ತಮ್ಮ ವಿಕ್ರಮ್ ಸಿಂಹ ಕಾಡುಗಳ್ಳ ಎಂಬ ಕಾಂಗ್ರೆಸ್​ ಪೋಸ್ಟ್​ಗೆ ವ್ಯಂಗ್ಯವಾಗಿ ಕಿಡಿಕಾರಿದ್ದಾರೆ.

ಅಣ್ಣ ಪ್ರತಾಪ್ ಸಿಂಹ ನಾಡಕಳ್ಳ, ತಮ್ಮ ವಿಕ್ರಮ್ ಸಿಂಹ ಕಾಡುಗಳ್ಳ! ಹತ್ತಾರು ಎಕರೆಯಲ್ಲಿದ್ದ ಸಾವಿರಾರು ಮರಗಳನ್ನು ಮಾರಣ ಹೋಮ ಮಾಡಿ, ಕಳ್ಳಸಾಗಣೆಗೆ ಮುಂದಾಗಿದ್ದ ಪ್ರತಾಪ್ ಸಿಂಹನ ಸಹೋದರನ ಮೇಲೆ ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುತ್ತಿದೆ

ವೀರಪ್ಪನ್​ನಿಂದ ತೆರವಾದ ಸ್ಥಾನಕ್ಕೆ ತಮ್ಮ ಸಹೋದರನನ್ನು ಪ್ರತಿಷ್ಠಾಪಿಸಲು ಮುಂದಾಗಿರುವಂತಿದೆ ಪ್ರತಾಪ್ ಸಿಂಹ! ಈ ಅಣ್ಣ ತಮ್ಮಂದಿರಿಂದ ನಾಡು, ಕಾಡು ಎರಡಕ್ಕೂ ಆಪತ್ತು ಅಲ್ಲವೇ ಬಿಜೆಪಿ ಎಂದು ಕಾಂಗ್ರೆಸ್​ ಇತ್ತೀಚೆಗೆ ಟ್ವೀಟ್​ ಮಾಡಿತ್ತು.

ಈ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದು, ಮಾನ್ಯ ಮುಖ್ಯಮಂತ್ರಿಗಳೇ, ನನ್ನ ತಮ್ಮ ಮರಗಳ್ಳನಾ? ನಿಮ್ಮದೇ ಸರ್ಕಾರ ಹಾಕಿರುವ FIR ನಲ್ಲಿ ಯಾರ ಹೆಸರಿದೆ? ನನ್ನ ಮೇಲೆ ಇನ್ನೂ ನಡೆಯಲಿದೆ ಅವ್ಯಾಹತ ಆಕ್ರಮಣ ಎಂದು ಬರೆದುಕೊಂಡಿದ್ದಾರೆ.