ದೆಹಲಿ ಮದ್ಯ ನೀತಿ ಪ್ರಕರಣ: ಎಎಪಿ ಸಂಸದ ಸಂಜಯ್ ಸಿಂಗ್ ಜಾಮೀನು ಅರ್ಜಿ ವಜಾ

ದೆಹಲಿ, ಡಿ.22: ದೆಹಲಿ ಮದ್ಯ ನೀತಿಗೆ ಸಂಬಂಧಿಸಿದಂತೆ ಎಎಪಿ ನಾಯಕ ಸಂಜಯ್ ಸಿಂಗ್  ಅವರ ಜಾಮೀನು ಅರ್ಜಿಯನ್ನು ದೆಹಲಿ ಕೋರ್ಟ್​ ಇಂದು ವಜಾಗೊಳಿಸಿದೆ. ಮದ್ಯ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಅವರನ್ನು ಬಂಧಿಸಲಾಗಿತ್ತು. ವಿಶೇಷ ನ್ಯಾಯಾಧೀಶ ಎಂಕೆ ನಾಗ್ಪಾಲ್ ಅವರು ರಾಜ್ಯಸಭಾ ಸಂಸದ ಸಿಂಗ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಸಂಜಯ್​​​​ ಸಿಂಗ್​​​​ ಅವರ ಜಾಮೀನು ಅರ್ಜಿಯನ್ನು ಗುರುವಾರ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿತ್ತು. ಡಿಸೆಂಬರ್​​​ 22ರಂದು ಅರ್ಜಿಯನ್ನು ವಿಚಾರ ಮಾಡುವುದಾಗಿ ಹೇಳಿತ್ತು. ಇನ್ನು ಈ ಪ್ರಕರಣದ ವಿಚಾರಣೆ ವೇಳೆ ಸಂಜಯ್​​​ ಸಿಂಗ್ ಅವರ ವಕೀಲರು ವಾದ ಮಂಡಿಸುವ ವೇಳೆ ಸಂಜಯ್​​​ ಸಿಂಗ್ ಅವರಿಗೆ ಲಂಚ ನೀಡುವ ಕುರಿತು ಆರೋಪಿ ದಿನೇಶ್ ಅರೋರಾ ಮತ್ತು ಇತರ ಸಾಕ್ಷಿಗಳ ಹೇಳಿಕೆಗಳಲ್ಲಿ ವಿರೋಧಾಭಾಸಗಳಿವೆ ಎಂದು ಹೇಳಿದರು.

ಇನ್ನು ಸಂಜಯ್​​​ ಸಿಂಗ್​​ ಅವರ ಜಾಮೀನಿ ಅರ್ಜಿಯನ್ನು ಇಡಿ ವಿರೋಧಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ತನಿಖೆಗೆ ಅಡ್ಡಿಯಾಗಬಹುದು. ಸಾಕ್ಷಿಗಳನ್ನು ನಾಶ ಮಾಡಬಹುದು ಎಂದು ಇಡಿ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 4 ರಂದು ರಾಜ್ಯಸಭಾ ಸಂಸದ ಸಂಜಯ್​​ ಸಿಂಗ್ ಅವರನ್ನು ಬಂಧಿಸಲಾಗಿತ್ತು.

ಮದ್ಯ ತಯಾರಕರು, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಲಾಭದಾಯಕವಾಗಿರುವ 2021-2022 ರ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಈ ಬಗ್ಗೆ ಸಂಜಯ್​​​ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.