ಬೆಳಗಾವಿ ರೀತಿ ಹಾವೇರಿಯಲ್ಲೂ ಹೀನ ಕೃತ್ಯ: ಪ್ರೀತಿಸಿ ಓಡಿ ಹೋದರೆಂದು ಯುವಕನ ಸೋದರ ಮಾವನ ಅರೆಬೆತ್ತಲೆಗೊಳಿಸಿ ಹಲ್ಲೆ

ಹಾವೇರಿ, ಡಿ.19: ತಾನು ಪ್ರೀತಿಸಿದ ಯುವತಿ ಜೊತೆ ಮಗ ಓಡಿ ಹೋದ ಎಂಬ ಕಾರಣಕ್ಕೆ ಮಹಿಳೆಯನ್ನು ಬೆತ್ತಲೆ ಮಾಡಿ ಹಲ್ಲೆ ನಡೆಸಿ ಹೀನಾಯ ಕೃತ್ಯ ಎಸಗಿದ್ದ ಘಟನೆ ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದಿತ್ತು. ಈ ಸುದ್ದಿ ಸದನದಿಂದ ಹಿಡಿದು ಇಡೀ ದೇಶದಲ್ಲಿ ಭಾರೀ ಸದ್ದು ಮಾಡಿತ್ತು. ಈಗ ಇದೇ ರೀತಿಯ ಮತ್ತೊಂದು ಘಟನೆ ಹಾವೇರಿಯಲ್ಲಿ ನಡೆದಿದೆ. ಆದರೆ ಇಲ್ಲಿ ಯುವಕನ ಸೋದರ ಮಾವನನ್ನು ಅರೆಬೆತ್ತಲೆ ಮಾಡಿ ಹಲ್ಲೆ ಮಾಡಲಾಗಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮುದೇನೂರ ಗ್ರಾಮದಲ್ಲಿ ಯುವಕ-ಯುವತಿ ಪ್ರೀತಿಸಿ ಓಡಿ ಹೋದರು ಎಂಬ ಒಂದೇ ಒಂದು ಕಾರಣಕ್ಕೆ ಯುವತಿಯ ಕಡೆಯವರು ಯುವಕನ ಸೋದರ ಮಾವನನ್ನು ಅರೆಬೆತ್ತಲೆ ಮಾಡಿ ಥಳಿಸಿದ ಅಮಾನವೀಯ ಘಟನೆ ನಡೆದಿದೆ. ರಾಣೆಬೆನ್ನೂರು ತಾಲುಕಿನ ಮುದೇನೂರ ಗ್ರಾಮದ ಯುವಕನೊಂದಿಗೆ ಚಳಗೇರಿ ಗ್ರಾಮದ ಯುವತಿ ಓಡಿ ಹೋಗಿದ್ದಾಳೆ. ಈ ಸಂಬಂಧ ಹಲಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಂಬಂಧಿಕರು ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಇನ್ನು ಮತ್ತೊಂದೆಡೆ ಓಡಿ ಹೋದ ಯುವಕನ ಸೋದರ ಮಾವ ಪ್ರಶಾಂತ್ ಎಂಬುವವರನ್ನು ಕಿಡ್ನಾಪ್ ಮಾಡಿ ರಾಣೆಬೆನ್ನೂರ ಗ್ರಾಮೀಣ ಠಾಣೆಯ ಎದರೇ ಅರೆಬೆತ್ತಲೆ ಮಾಡಿ ಯುವತಿಯ ಸಂಬಂಧಿಕರು ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಬೆಳಗಾವಿ ಘಟನೆ ಬಳಿಕ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತೆ ಎಂದು ಸರ್ಕಾರ ಹೇಳಿತ್ತು. ಆದರೆ ಆಗ ಇದೇ ರೀತಿಯ ದೌರ್ಜನ್ಯಗಳು ಮುಂದುವರೆದಿದೆ. ಪ್ರೀತಿಸಿ ಓಡಿ ಹೋದರು ಎಂಬ ಕಾರಣಕ್ಕೆ ಹಲ್ಲೆ ನಡೆದಿದೆ.