ಬೆಂಗಳೂರು ಮಂಗಳೂರು ರೈಲು ಸಂಚಾರ ಡಿಸೆಂಬರ್ 14ರಿಂದ ಒಂದು ವಾರ ರದ್ದು.

ಬೆಂಗಳೂರು, ಡಿಸೆಂಬರ್ 13: ಹಾಸನ ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಯಾರ್ಡ್ ಮರುನಿರ್ಮಾಣ ಕಾಮಗಾರಿಗಾಗಿ ಡಿಸೆಂಬರ್ 14 ರಿಂದ ಡಿಸೆಂಬರ್ 22 ರವರೆಗೆ ಬೆಂಗಳೂರು ಮತ್ತು ಮಂಗಳೂರು ನಡುವಿನ ರೈಲು ಸಂಚಾರ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ. ಡಿಸೆಂಬರ್ 14 ರಿಂದ 18 ರವರೆಗೆ ನಾನ್-ಇಂಟರ್‌ಲಾಕಿಂಗ್ ಮತ್ತು ಡಿಸೆಂಬರ್ 19 ರಿಂದ ಡಿಸೆಂಬರ್ 22 ರವರೆಗೆ ಹಾಸನ ಯಾರ್ಡ್‌ ಪುನರ್ನಿರ್ಮಾಣಕ್ಕೆ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ ಎಂದು ಡಿಸೆಂಬರ್ 11 ರಂದು ಪ್ರಿನ್ಸಿಪಲ್ ಚೀಫ್ ಆಪರೇಷನ್ ಮ್ಯಾನೇಜರ್ ಅವರು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಡಿಸೆಂಬರ್ 14 ರಿಂದ 18 ರ ಅವಧಿಯಲ್ಲಿ ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ಮತ್ತು ಸಂಜೆ 6 ರಿಂದ ರಾತ್ರಿ 8 ರವರೆಗೆ ಲೈನ್ ಬ್ಲಾಕ್, ಸಿಗ್ನಲ್ ಮತ್ತು ದೂರಸಂಪರ್ಕ ಬ್ಲಾಕ್ ಜಾರಿಯಲ್ಲಿರಲಿದೆ. ಈ ಸಮಯದಲ್ಲಿ ರೈಲು ಸಂಚಾರಕ್ಕೆ ಹಾಸನದಲ್ಲಿ ಯಾವುದೇ ರೈಲು ಮಾರ್ಗಗಳು ಲಭ್ಯವಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಡಿಸೆಂಬರ್ 19 ರಿಂದ ಡಿಸೆಂಬರ್ 22 ರವರೆಗೆ, ಎಂಜಿನಿಯರಿಂಗ್ ಕೆಲಸಕ್ಕಾಗಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಟ್ರಾಫಿಕ್ ಬ್ಲಾಕ್ ಅನ್ನು ವಿಧಿಸಲಾಗುವುದು ಮತ್ತು ಈ ಅವಧಿಯಲ್ಲಿ ಯಾವುದೇ ರೈಲುಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ರದ್ದುಗೊಂಡ ರೈಲುಗಳ ವಿವರ

  • ಬೆಂಗಳೂರು-ಕಣ್ಣೂರು-ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ (ಪ್ರತಿ ರಾತ್ರಿ ಸಂಚರಿಸುವ ರೈಲು) – ಡಿಸೆಂಬರ್ 16 ರಿಂದ ಡಿಸೆಂಬರ್ 20 ರವರೆಗೆ ರದ್ದು.
  • ಬೆಂಗಳೂರು-ಕಾರವಾರ-ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ (ಪ್ರತಿ ರಾತ್ರಿ ಸಂಚರಿಸುವ ರೈಲು) – ಡಿಸೆಂಬರ್ 16 ರಿಂದ ಡಿಸೆಂಬರ್ 20 ರವರೆಗೆ ರದ್ದು.
  • ಯಶವಂತಪುರ-ಮಂಗಳೂರು ಜಂಕ್ಷನ್ ಗೊಮ್ಮಟೇಶ್ವರ (ವಾರಕ್ಕೆ ಮೂರು ದಿನ ಸಂಚರಿಸುವ) ಎಕ್ಸ್‌ಪ್ರೆಸ್ – ಡಿಸೆಂಬರ್ 14, 17, 19 ಮತ್ತು 21 ರಂದು ರದ್ದು.
  • ಯಶವಂತಪುರ-ಕಾರವಾರ (ವಾರಕ್ಕೆ ಮೂರು ದಿನ ಸಂಚರಿಸುವ) ಎಕ್ಸ್‌ಪ್ರೆಸ್ – ಡಿಸೆಂಬರ್ 13, 15, 18, 20 ಮತ್ತು 22 ರಂದು ರದ್ದು.
  • ಯಶವಂತಪುರ-ಮಂಗಳೂರು ಜಂಕ್ಷನ್ ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16539) – ಡಿಸೆಂಬರ್ 16 ರಂದು ರದ್ದು.
  • ಮಂಗಳೂರು ಜಂಕ್ಷನ್-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16540) – ಡಿಸೆಂಬರ್ 17 ರಂದು ರದ್ದು.