ಭಟ್ಕಳದಲ್ಲಿ ವೃದ್ಧೆಯನ್ನು ಸಾಯಿಸಿ ದರೋಡೆಗೆ ಯತ್ನ – ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾದ ವೃದ್ಧೆ


ಭಟ್ಕಳದ ಮುಂಡಳ್ಳಿ ಜೋಗಿ ಮನೆ ಸಮೀಪ ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯನ್ನು ಟಾರ್ಗೆಟ್‌ ಮಾಡಿದ ಕಳ್ಳನೋರ್ವ ವೃದ್ಧೆಯನ್ನು ಸಾಯಿಸಿ, ದರೋಡೆ ಮಾಡಲು ಯತ್ನಿಸಿದ್ದು, ಅದೃಷ್ಟವಶಾತ್‌ ವೃದ್ಧೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

71 ವರ್ಷದ ಶೋಬಾ ದಿಕ್ಷೀತ ಎಂಬುವವಳೇ ದಾಳಿಗೆ ಒಳಗಾಗಿದ್ದು, ಈಕೆಗೆ ಓರ್ವ ಪುತ್ರನಿದ್ದು ಆತ ಉದ್ಯೋಗದ ನಿಮಿತ್ತ ಉಡುಪಿಯಲ್ಲಿ ವಾಸವಾಗಿದ್ದಾನೆ. ಸದ್ಯ ಮನೆಯಲ್ಲಿ ವೃದ್ಧೆ ಒಬ್ಬಳೇ ವಾಸವಾಗಿದ್ದಳು. ಇದನ್ನು ಗಮನಿಸಿದ ಕಳ್ಳನೊರ್ವ, ಮನೆಯ ಮೇಲಿನ ಬಾಲ್ಕಿನಿಯಿಂದ ಬಾಗಿಲಿನ ಕೀಲಿ ತೆಗೆದು ಮನೆಯ ಒಳಗೆ ಇಳಿದು ಬಂದು, ಹಾಲಿನಲ್ಲಿ ಟಿ.ವಿ ನೋಡುತ್ತಾ ಕುಳಿತುಕೊಂಡಿದ್ದ ವೃದ್ಧೆಯ ಕುತ್ತಿಗೆಗೆ ಬಟ್ಟೆಯಿಂದ ಸುತ್ತಿ ಎಳೆದು ಹಿಡಿದು ಕೊಲೆ ಮಾಡಲು ಯತ್ನಿಸಿದ ವೇಳೆ ವೃದ್ಧೆ ಕೂಗಾಡಿದ್ದಾಳೆ.



ನಂತರ ಗಾಬರಿಯಾದ ಕಳ್ಳ ಹಾಗೆಯೇ ಬಿಟ್ಟು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪರಾರಿಯಾಗಿದ್ದಾನೆ. ಘಟನೆಯಲ್ಲಿ ವೃದ್ಧೆಯ ಮೂಗಿನ ಭಾಗದಲ್ಲಿ ಚಿಕ್ಕ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕಳೆದ 15 ದಿನದ ಹಿಂದಷ್ಟೇ ಇವರ ಮನೆಯಲ್ಲಿಎರಡು ಚಿನ್ನದ ಬಳೆ, ಒಂದು ಚೈನ್ ,ಒಂದು ಉಂಗುರ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಕುರಿತು ವೃದ್ಧೆಯ ಪುತ್ರ ಹರೀಶ ದೀಕ್ಷಿತ್ ಗ್ರಾಮೀಣ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ತನಿಖಾಧಿಕಾರಿ ಸಿ.ಪಿ.ಐ ಚಂದನ್ ಗೋಪಾಲ ತನಿಖೆ ಕೈಗೊಂಡಿದ್ದಾರೆ.