ಚುನಾವಣಾ ಸೋಲಿನ ಬೆನ್ನಲ್ಲೇ ಇಂಡಿ ಒಕ್ಕೂಟಕ್ಕೆ ಮಹತ್ವದ ಸಂದೇಶ ನೀಡಿದ ಮಲ್ಲಿಕಾರ್ಜುನ ಖರ್ಗೆ!

ನವದೆಹಲಿ(ಡಿ.03) ಪಂಚ ರಾಜ್ಯಗಳ ಚುನಾವಣೆ ಕಾಂಗ್ರೆಸ್‌ಗೆ ಆಘಾತ ನೀಡಿದೆ. ಚತ್ತೀಸಘಡದಲ್ಲಿ ಕಾಂಗ್ರೆಸ್ ಅಧಿಕಾರ ಮುಂದುವರಿಸುವ ವಿಶ್ವಾಸದಲ್ಲಿದ್ದರೆ, ತೆಲಂಗಾಣದಲ್ಲಿ ಗೆಲುವಿನ ವಿಶ್ವಾಸವಿತ್ತು. ಇತ್ತ ರಾಜಸ್ಥಾನದಲ್ಲಿ ಜಿದ್ದಾಜಿದ್ದಿನ ಹೋರಾಟ ಎಂದೇ ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಫಲಿತಾಂಶ ಕಾಂಗ್ರೆಸ್ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದೆ. ಕೇವಲ ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಪತಾಕೆ ಹಾರಾಡುತ್ತಿದೆ. ಇನ್ನುಳಿದ ಎಲ್ಲಾ ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಈ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂಡಿಯಾ ಮೈತ್ರಿ ಪಕ್ಷಗಳಿಗೆ ಮಹತ್ವದ ಸಂದೇಶ ನೀಡಿದ್ದಾರೆ.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನಿಂದ ಯಾರು ದೃತಿಗೆಡಬೇಕಿಲ್ಲ. 2024ರ ಲೋಕಸಭೆ ಚುನಾವಣೆಗೆ ನಾವು ಇಮ್ಮಡಿ ಉತ್ಸಾಹ, ಮತ್ತಷ್ಟು ಪರಿಶ್ರಮದೊಂದಿಗೆ ತಯಾರಿ ನಡಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಮೂಲಕ ಪಂಚ ರಾಜ್ಯಗಳ ಚುನಾವಣೆ ಸೋಲು-ಗೆಲುವಿನ ಆಧಾರದಲ್ಲಿ ನಿರ್ಧಾರಗಳು ಬೇಡ, ಒಗ್ಗಟ್ಟಾಗಿ ಲೋಕಸಭೆ ಚುನಾವಣೆ ಅಖಾಡಕ್ಕೆ ಧುಮಕಲು ಖರ್ಗೆ ಸಂದೇಶ ನೀಡಿದ್ದಾರೆ.

ಚುನಾವಣಾ ಫಲಿತಾಂಶದ ಬೆನ್ನಲ್ಲೇ ಎಕ್ಸ್ ಖಾತೆ ಮೂಲಕ ಮಲ್ಲಿಕಾರ್ಜುನ ಖರ್ಗೆ ಸಂದೇಶ ಹಂಚಿಕೊಂಡಿದ್ದಾರೆ. ತೆಲಂಗಾಣ ಮತದಾರರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಹಾಗೂ ವಿಶ್ವಾಸವನ್ನು ಮುರಸ್ಥಾಪಿಸಿದ್ದಾರೆ. ತೆಲಂಗಾಣ ಜನತೆಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಚತ್ತೀಸಘಡ, ಮಧ್ಯಪ್ರದೇಶ, ಹಾಗೂ ರಾಜಸ್ಥಾನದಲ್ಲಿನ ಫಲಿತಾಂಶ ನಮ್ಮ ನಿರೀಕ್ಷೆಯಂತೆ ಇಲ್ಲ. ಆದರೆ ಈ ಮೂರು ರಾಜ್ಯದಲ್ಲಿ ನಮಗೆ ಮತ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನಾವು ಕಠಿಣ ಪರಿಶ್ರಮ, ಹಾಗೂ ದೃಢಸಂಕಲ್ಪದಿಂದ ಮತ್ತಷ್ಟು ಶಕ್ತಿಶಾಲಿಯಾಗಿ ಹಿಂತಿರುಗುತ್ವೇ ಅನ್ನೋ ವಿಶ್ವಾಸವಿದೆ. ಫಲಿತಾಂಶ ಘೋಷಣೆಯಾದ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಎಲ್ಲಾ ಶಕ್ತಿಯೊಂದಿಗೆ ಚುನಾವಣೆಯಲ್ಲಿ ಪಾಲ್ಗೊಂಡಿದೆ. ಕಾಂಗ್ರೆಸ್‌ನ ಅತೀ ದೊಡ್ಡ ಕಾರ್ಯಕರ್ತರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಈ ಸೋಲಿನಿಂದ ಕಂಗೆಡದೆ, ಇಂಡಿಯಾ ಮೈತ್ರಿ ಪಕ್ಷ ಒಗ್ಗಟ್ಟಾಗಿ ಲೋಕಸಭೆ ಚುನಾವಣೆಗೆ ಇಮ್ಮಡಿ ಉತ್ಸಾಹದೊಂದಿಗೆ ತಯಾರಿ ನಡೆಸಬೇಕಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.  

ರಾಜಸ್ಥಾನದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಇದೀಗ ಸೋಲಿನಿಂದ ಅಧಿಕಾರ ಕಳೆದುಕೊಂಡಿದೆ. ಇತ್ತ ಚತ್ತೀಸಘಡದಲ್ಲೂ ಅಧಿಕಾರ ಕಳೆದುಕೊಂಡ ಕಾಂಗ್ರೆಸ್, ಮಧ್ಯಪ್ರದೇಶದಲ್ಲಿ ಬಿಜೆಪಿ ಮಣಿಸಲು ಸಾಧ್ಯವಾಗದೆ ಕೈಚೆಲ್ಲಿದೆ. ಇತ್ತ ತೆಲಂಗಾಣದಲ್ಲಿ ಕಾಂಗ್ರೆಸ್ ಅತ್ಯುತ್ತಮ ಗೆಲುವಿನ ಸಿಹಿ ಕಂಡಿದೆ.