BIG BREAKING NEWS ಭಟ್ಕಳಕ್ಕೆ ಆಗಮಿಸಿದ ಸಿಎಂ ಬೊಮ್ಮಾಯಿ: ಗುಡ್ಡ ಕುಸಿದ ಸ್ಥಳಕ್ಕೆ ಕೆಲವೇ ಕ್ಷಣಗಳಲ್ಲಿ ಭೇಟಿ

ಭಟ್ಕಳ: ಕಾರವಾರದಿಂದ ರಸ್ತೆ ಮಾರ್ಗವಾಗಿ ಹೊರಟ ಸಿಎಂ ಬೊಮ್ಮಾಯಿ ಭಟ್ಕಳಕ್ಕೆ ಆಗಮಿಸಿದ್ದಾರೆ. ಗೋವಾದಿಂದ ಹೊರಟು ಸಿಎಂ ಸಂಜೆ 5 ಗಂಟೆಗೆ ಕಾರವಾರ ತಲುಪಿದರು. ಇದೀಗ ರಸ್ತೆ ಮಾರ್ಗವಾಗಿ ಭಟ್ಕಳಕ್ಕೆ ಆಗಮಿಸಿದ್ದಾರೆ. ಕಂದಾಯ ಸಚಿವ ಆರ್ ಅಶೋಕ್ ಕೂಡಾ ಸಿಎಂ ಜೊತೆ ಆಗಮಿಸಿದ್ದಾರೆ. ಮೊದಲು ಭಟ್ಕಳದ ಮಳೆಹಾನಿ ಪ್ರದೇಶಕ್ಕೆ ಸಿಎಂ ಭೇಟಿ ನೀಡಲಿದ್ದಾರೆ.

ಮೊದಲು ಭಟ್ಕಳದ ಮುಟ್ಟಳ್ಳಿಗೆ ಭೇಟಿ ನೀಡಿ ಗುಡ್ಡಕುಸಿತವಾದ ಪ್ರದೇಶವನ್ನು ವೀಕ್ಷಿಸಲಿದ್ದಾರೆ. ಬಳಿಕ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಮಳೆಹಾನಿಯಿಂದ ಉಂಟಾದ ನಷ್ಟ ಹಾಗೂ ಪರಿಹಾರ ಕ್ರಮಗಳ ಕುರಿತು ಸಭೆ ನಡೆಸಲಿದ್ದಾರೆ. ಸರ್ಕಾರದಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಿದ್ದಾರೆ.

ನಿನ್ನೆ ಭಟ್ಕಳದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರು. ಅಲ್ಲದೇ ತಾಲೂಕಿನಲ್ಲಿ ಅಪಾರ ಪ್ರಮಾಣದ ಹಾನಿಯುಂಟಾಗಿತ್ತು. ಹಲವಾರು ಗ್ರಾಮಗಳು ಜಲಾವೃತಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಮಳೆ ಹಾನಿ ಪ್ರದೇಶಕ್ಕೆ ಸಿಎಂ ಭೇಟಿ ನೀಡಲಿದ್ದಾರೆ.