ಗದಗ: ಕುಡಿದ‌ ಮತ್ತಿನಲ್ಲಿ ತಾಯಿ ಮಡಿಲಲ್ಲಿದ್ದ ಹಸುಗೂಸನ್ನು ಹೊತ್ತೊಯ್ದ ತಂದೆ, ಮುಂದೇನಾಯ್ತು?

ಗದಗ, ನ.17: ತಾಯಿ ಮಡಿಲಿನಲ್ಲಿದ್ದ ಆರು ದಿನದ ಗಂಡು ಮಗುವನ್ನು ತಂದೆಯೇ ಬೇರ್ಪಡಿಸಿದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ. ಹೌದು, ಕುಡಿದ ಅಮಲಿನಲ್ಲಿ ಮಗುವನ್ನು ತಂದೆ ಹೊತ್ತೊಯ್ದಿದ್ದಿದ್ದು, ಮಗುವಿನ ಜೊತೆ ಓಡಾಡುತ್ತಿರುವ ವ್ಯಕ್ತಿಯ ದೃಶ್ಯಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಆಸ್ಪತ್ರೆಯಿಂದ ಡಿಸ್ಚಾರ್ಜ‌್ ಆಗಿ ಗದಗದಲ್ಲಿ ಮಗುವಿನ ಜೊತೆ ಬಾಣಂತಿ ಹಾಗೂ ಪತಿ ವಾಸವಿದ್ದರು. ಆದರೆ, ಕುಡಿದ‌ ಮತ್ತಿನಲ್ಲಿ ತಾಯಿ ಮಡಿಲಲ್ಲಿದ್ದ ಆರು‌ ದಿನದ ಮಗುವನ್ನು ತಂದೆ ಹೊತ್ತೊಯ್ದಿದ್ದು, ತಡರಾತ್ರಿ ಲಕ್ಷ್ಮೇಶ್ವರ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಗುವಿನ ಜೊತೆ ತಂದೆ ಕಾಣಿಸಿಕೊಂಡಿದ್ದಾನೆ.

ಹಸುಗೂಸಿನ ಜೊತೆ ವ್ಯಕ್ತಿಯ‌ ಅನುಮಾನಾಸ್ಪದ ಓಡಾಟ ಕಂಡ ಸ್ಥಳಿಯರು, ಕೂಡಲೇ ಲಕ್ಷ್ಮೇಶ್ವರ ಠಾಣಾ ಪೊಲೀಸರಿಗೆ‌ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗುವನ್ನು ರಕ್ಷಣೆ ಮಾಡಿದ್ದು, ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಸದ್ಯ ಮಗುವನ್ನು ಮಕ್ಕಳ ದತ್ತು ಸ್ವೀಕಾರ ಕೇಂದ್ರದಲ್ಲಿ ಆರೈಕೆ ಮಾಡಲಾಗಿದೆ.

ಮಗು ಹುಡುಕಿಕೊಂಡು ಬಂದ ತಂದೆ

ಘಟನೆ ಬಳಿಕ ಮಗುವಿನ ತಂದೆ ಸ್ಥಳದಿಂದ ಪರಾರಿಯಾಗಿದ್ದನು. ಮರುದಿನ ಮಗು ಹುಡುಕಿಕೊಂಡು ಪೋಷಕರು ಬಂದಿದ್ದಾರೆ. ಈ ವೇಳೆ ಮಗು ಹಸ್ತಾಂತರಿಸಲು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಸೂಕ್ತ ತನಿಖೆ ನಡೆದ ಬಳಿಕ ಪೋಷಕರಿಗೆ ಮಗು ನೀಡಲು ನಿರ್ಧರಿಸಲಾಗಿದೆ.