ಹೆಚ್​.ಡಿ.ರೇವಣ್ಣ ಆಪ್ತನ ಹತ್ಯೆಗೆ ಯತ್ನ ಪ್ರಕರಣ: ಓರ್ವ ಇನ್ಸ್​ಪೆಕ್ಟರ್ ಸೇರಿದಂತೆ 6 ಆರೋಪಿಗಳ ಬಂಧನ

ಹಾಸನ, (ಅಕ್ಟೋಬರ್ 22): ಮಾಜಿ ಸಚಿವ, ಜೆಡಿಎಸ್ ಶಾಸಕ ಹೆಚ್​.ಡಿ.ರೇವಣ್ಣ ಆಪ್ತ ಅಶ್ವತ್ಥ್ ನಾರಾಯಣಗೌಡ ಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆ ಆರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಓರ್ವ ಇನ್ಸ್​ಪೆಕ್ಟರ್​ ಸೇರಿ 6 ಆರೋಪಿಗಳನ್ನು ಬಂಧಿಸುವಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಕೋಲಾರ SID ವಿಭಾಗದ ಇನ್ಸ್​​ಪೆಕ್ಟರ್​ ಅಶೋಕ್, ಸತೀಶ್, ತೇಜಸ್ವಿ, ಮುರುಗನ್, ಮಧುಸೂದನ್, ಅಶೋಕ್, ಅರವಿಂದ್ ಬಂಧಿತರು. ಆರೋಪಿಗಳಿಗೆ ಸಹಾಯ ಮಾಡಿದ ಆರೋಪದಲ್ಲಿ ಕೋಲಾರ ಎಸ್​ಐಡಿ ವಿಭಾಗದ ಇನ್ಸ್​ಪೆಕ್ಟರ್ ಅಶೋಕ್​ ಅವರನ್ನು ಬಂಧಿಸಲಾಗಿದೆ.

ಇನ್ನು ಬಂಧಿತರಿಂದ ಒಂದು ಇನ್ನೋವಾ ಕಾರು, ಒಂದು ಐ10 ಕಾರು, ಫೋರ್ಡ್ ಕಾರು, 8 ಮೊಬೈಲ್​ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಕೇಸ್​ನಲ್ಲಿ ಲೋಹಿತ್, ಪ್ರವೀಣ್ ಕೂಡ ಭಾಗಿಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಹೀಗಾಗಿ ಇವರ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.

ಮಾಜಿ ಸಚಿವ ರೇವಣ್ಣರ ಹೊಳೆನರಸೀಪುರ ನಿವಾಸದಿಂದ ತಮ್ಮ ಮನೆ ಇರುವ ಚನ್ನರಾಯಪಟ್ಟಣದ ಕಡೆಗೆ ಹೋಗುವ ಮಾರ್ಗದ ಸೂರನಹಳ್ಳಿ ಬಳಿ ಅಕ್ಟೋಬರ್ 10ರಂದು ವಾಹನ ಅಡ್ಡಗಟ್ಟಿ ಕೊಲೆಯತ್ನ ನಡೆದಿತ್ತು. ಈ ಬಗ್ಗೆ ಹೊಳೆನರಸೀಪುರ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

ದುಷ್ಕರ್ಮಿಗಳು ಪದೇಪದೆ ರೇವಣ್ಣ ಅವರ ಆಪ್ತರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಆಗಸ್ಟ್ 9 ರಂದು ರೇವಣ್ಣ ಅವರ ಆಪ್ತ ಕೃಷ್ಣೇಗೌಡ ಅವರನ್ನು ಕೊಲೆ ಮಾಡಲಾಗಿತ್ತು. ಇವರು ಗ್ರಾನೈಟ್ ಉದ್ಯಮಿ ಮತ್ತು ಗುತ್ತಿಗೆದಾರರಾಗಿದ್ದರು. ಇಂದು ಮತ್ತೊಬ್ಬ ಆಪ್ತ ಹಾಗೂ ಗುತ್ತಿಗೆದಾರನ ಮೇಲೆ ದಾಳಿ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.