ಇಬ್ಬರು ವ್ಯಕ್ತಿಗಳನ್ನ ಕಿಡ್ನಾಪ್ ಮಾಡಿದ ಅಕ್ರಮ ಮರಳು ದಂಧೆಕೋರರು, ನದಿ ಪಾಲಾಗಬೇಕಿದ್ದವರು ಜಸ್ಟ್ ಮಿಸ್

ಯಾದಗಿರಿ, ಅ.22: ಅಕ್ರಮ ಮರಳು ದಂಧೆಕೋರರಿಂದ ಸುರಪುರ ತಾಲೂಕಿನ ನಡಿಹಾಳ್ ಗ್ರಾಮದ ನಿವಾಸಿಗಳಾದ ಇಬ್ಬರನ್ನು ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವಿಭೂತಳ್ಳಿ ಬಳಿ ನಡೆದಿದೆ. ರಾಜು ಹಾಗೂ ಶರಣಗೌಡ ಹಯ್ಯಾಳ ಎಂಬುವವರನ್ನು ರೌಡಿ ಶೀಟರ್ ವಿಜಯ ರಾಠೋಡ್, ಬಸುರೆಡ್ಡಿ ಹಾಗೂ ಇನ್ನಿತರರು ಸೇರಿ ಕಾರಿನಲ್ಲಿ ಕರೆದುಕೊಂಡು ಹೋಗಿ ರಾಡ್​ನಿಂದ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.

ಇನ್ನು ರೌಡಿ ಶೀಟರ್ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಆಗಿರುವ ವಿಜಯ ರಾಠೋಡ್,  ಸಚಿವ ಶರಣಬಸಪ್ಪ ದರ್ಶನಾಪುರ ಬೆಂಬಲಿಗ ಎನ್ನಲಾಗುತ್ತಿದೆ. ಇವರು ಇಬ್ಬರನ್ನು ಕಾರಿನ ಡಿಕ್ಕಿಯೊಳಗೆ ಹಾಕಿ ಮಾರಣಾಂತಿಕ ಹಲ್ಲೆ ಮಾಡಿದ್ದು, ಜೀವಂತವಾಗಿ ಕೃಷ್ಣಾ ನದಿಗೆ ಎಸೆಯಲು ಪ್ಲಾನ್ ಮಾಡಿದ್ದರಂತೆ. ಇನ್ನು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದ ರಾಜು ಹಾಗೂ ಶರಣಗೌಡ ಇಬ್ಬರು ಕಲ್ಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ನಿನ್ನೆ(ಅ.21) ತಡ ರಾತ್ರಿ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಜಯ ರಾಠೋಡ್, ಬಸುರೆಡ್ಡಿ, ಮಲ್ಲಿಕಾರ್ಜುನ್​ ಸೇರಿದಂತೆ ಏಳು ಜನ ಆರೋಪಿಗಳ ವಿರುದ್ದ ದೂರು ದಾಖಲಾಗಿದೆ.