ದೀಪಾವಳಿಯಂದು ಕುಮಟಾದಲ್ಲಿ ವಿಶಿಷ್ಟ ಆಚರಣೆ – ಗಮನ ಸೆಳೆದ ಹೊಂಡೆಯಾಟ


ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ದೀಪಾವಳಿ ಪ್ರಯುಕ್ತ ಆಡಲಾಗುವ ವಿಶಿಷ್ಟ ಹೊಂಡೆಯಾಟ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಒಬ್ಬರಿಗೊಬ್ಬರು ಪಪ್ಪಾಯಿಯಿಂದ ಹೊಡೆದುಕೊಳ್ಳುವ ಈ ವಿಶೇಷ ಆಟದ ವರದಿ ಇಲ್ಲಿದೆ.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಹೊಂಡೆಯಾಟ ಕುಮಟಾದಲ್ಲಿ ಇಂದಿಗೂ ಜೀವಂತವಾಗಿದೆ. ದೀಪಾವಳಿಯ ಕೊನೆಯ 2 ದಿನಗಳು ಎಲ್ಲಾ ಸಮಾಜದವರು ಸಾಂಪ್ರದಾಯಿಕ ಪಪ್ಪಾಯಿ ಹೊಡೆಯಾಟವಾಡ್ತಾರೆ. ನಾಮಧಾರಿ, ಕೋಮಾರಪಂತ, ಹಾಲಕ್ಕಿ ಗೌಡ ಸಮುದಾಯದ ಯುವಕರು ಹೊಂಡೆಯಾಟದಲ್ಲಿ ತೊಡಗಿಸಿಕೊಳ್ಳುವುದು ವಿಶೇಷ. ದೇವರಹಕ್ಕಲದ ಶಾಂತಿಕಾ ಪರಮೇಶ್ವರಿ ದೇವಸ್ಥಾನದಿಂದ ಪ್ರಾರಂಭವಾಗುವ ಹೊಂಡೆಯಾಟ ಸುಭಾಸ ರಸ್ತೆ ಮಾರ್ಗವಾಗಿ ಪಿಕಪ್ ಬಸ್ಟ್ಯಾಂಡ್ ತಲುಪುತ್ತದೆ. ಅಲ್ಲಿ ಶಶಿಹಿತ್ತಲ-ಗುಂದಾ ಕಡೆಯಿಂದ ಬಂದ ಕೋಮಾರಪಂತ ಸಮುದಾಯದ ಯುವಕರು, ಒಟ್ಟಿಗೆ ಸೇರಿಕೊಂಡು ಹೊಂಡೆಯಾಡುತ್ತಾರೆ. ಅಲ್ಲಿಂದ ರಥಬೀದಿ, ಮೂರುಕಟ್ಟೆ ಮಾರ್ಗವಾಗಿ, ಈ ಹೊಂಡೆಯಾಟ ಗಿಬ್ ಸರ್ಕಲ್ಲಿನ ಹುಲಿದೇವರ ಕಟ್ಟೆಯಲ್ಲಿ ಕೊನೆಗೊಳ್ಳುತ್ತದೆ.



ಈ ಹಿಂದೆ ಕಲ್ಲಿನಿಂದ ಹೊಂಡೆಯಾಡುವ ಪದ್ಧತಿ ಇತ್ತು. ಕಲ್ಲಿನ ಹೊಡೆತಕ್ಕೆ ಪ್ರಾಣ ಕಳೆದುಕೊಳ್ಳುತ್ತಿದ್ದರಿಂದ, ಅಂದಿನ ಬ್ರಿಟಿಷ್ ಸರ್ಕಾರ ಈ ಅನಿಷ್ಟ ಪದ್ಧತಿಯನ್ನು ನಿಷೇಧಿಸಿತ್ತು. ಬಳಿಕ ತೆಂಗಿನಕಾಯಿ ಬಳಸಿ ಹೊಂಡೆಯಾಟವಾಡಲು ಪ್ರಾರಂಭಿಸಿದರು. ಕಾಲ ಕಳೆದಂತೆ ಈಗ ಪಪ್ಪಾಯಿ ಬಳಸಿ ಹೊಂಡೆಯಾಟವಾಡುವ ಪದ್ಧತಿ ಶುರುವಾಗಿದೆ. ಇದು ಇಂದಿನ ಆಧುನಿಕ ಯುಗದಲ್ಲಿಯೂ ಕೂಡ ಪ್ರಚಲಿತದಲ್ಲಿರುವುದು ಒಂದು ವಿಶೇಷವಾಗಿದೆ.

ಇನ್ನು ಈ ಹೊಂಡೆಯಾಟ ನೋಡಲು ನೂರಾರು ಜನರು ಸೇರುತ್ತಾರೆ. ಆಟಗಾರರಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಾರೆ. ಕವಣೆಯಲ್ಲಿ ಪಪ್ಪಾಯಿ ಇಟ್ಟು, ಕೈಯಲ್ಲಿ ಕಂಬಳಿ ಸುತ್ತಿಕೊಂಡು ಕುಳಿತ ವ್ಯಕ್ತಿಗೆ ಹೊಡೆಯುವಾಗ ಹೊಡೆತವನ್ನು ಕುಳಿತ ವ್ಯಕ್ತಿಯು ತಪ್ಪಿಸಿಕೊಳ್ಳಬೇಕಾಗುತ್ತದೆ. ಒಮ್ಮೊಮ್ಮೆ ಈ ಹೊಡೆತದಿಂದ ಪೆಟ್ಟು ತಗಲುವುದು ಸಾಮಾನ್ಯ. ಉಪ್ಪಿನ ಗಣಪತಿ, ದೇವರಹಕ್ಕಲ, ಚಿತ್ರಿಗಿ, ನೆಲ್ಲಿಕೇರಿ ಹಳೆ ಬಸ್ ನಿಲ್ದಾಣ, ಶಶಿಹಿತ್ತಲ-ಗುಂದಾ, ಬಸ್ತಿಪೇಟೆ, ಉಪ್ಪಾರಕೇರಿ, ಹಳಕಾರ ಸೇರಿದಂತೆ ಪಟ್ಟಣದ ವಿವಿಧ ಕಡೆಯ ಜನರು ಈ ಆಟದಲ್ಲಿ ತೊಡಗುತ್ತಾರೆ.

ದೀಪಾವಳಿ ಸಂದರ್ಭದಲ್ಲಿ ಕುಮಟಾದಲ್ಲಿ ಮಾತ್ರ ವಿಶೇಷವಾಗಿ ಕಂಡುಬರುವ ಈ ಪಪ್ಪಾಯಿ ಹೊಂಡೆಯಾಟ ನಿಜಕ್ಕೂ ಒಂದು ವಿಶೇಷವಾದ ಆಟವಾಗಿದೆ. ನೂರಾರು ವರ್ಷಗಳ ಇತಿಹಾಸವಿರುವ ಈ ಸಾಂಪ್ರದಾಯಿಕ ಆಟವನ್ನು ಇಂದಿನ ಯುವ ಪೀಳಿಗೆ ಮುಂದುವರಿಸಿಕೊಂಡು ಬರುತ್ತಿರುವುದು ಸಂತಸದ ಸಂಗತಿಯಾಗಿದೆ.