ಕುಮಟಾ:ವಿಶಿಷ್ಟವಾಗಿ ಗುರು ವಂದನೆ ಸಲ್ಲಿಸಿದ ವಿಧಾತ್ರಿ ಅಕಾಡೆಮಿಯ ವಿದ್ಯಾರ್ಥಿಗಳು

ಕುಮಟಾ: ಇಲ್ಲಿನ ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿದ್ದು, ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಪ್ರೊತ್ಸಹಿಸುತ್ತಾ ಬಂದಿರುತ್ತಾರೆ. ಇದರ ಒಂದು ಭಾಗವಾಗಿ, ಈ ವರ್ಷದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಯ ಸಂದರ್ಭದಲ್ಲಿ ಇಲ್ಲಿನ ವಿದ್ಯಾರ್ಥಿಗಳು ತಾವು ಕಲಿತಂತಹ ಪ್ರೌಢಶಾಲೆಗೆ ತೆರಳಿ ತಮಗೆ ಪ್ರೌಢಶಿಕ್ಷಣ ನೀಡಿದ ಎಲ್ಲಾ ಗುರುಗಳಿಗೆ ಗುರುಕಾಣಿಕೆಯನ್ನು ನೀಡಿ ಆಶೀರ್ವಾದ ಪಡೆಯುವುದರೊಂದಿಗೆ ವಿಶಿಷ್ಟವಾಗಿ ಗುರುವಂದನೆ ಸಮರ್ಪಿಸಿದರು.

ಉತ್ತರ ಕನ್ನಡ ಜಿಲ್ಲೆಯ ಪ್ರಮುಖವಾಗಿ ಅಂಕೋಲಾ, ಹೊನ್ನಾವರ ಹಾಗೂ ಕುಮಟಾ ತಾಲ್ಲೂಕಿನ *ಇಪ್ಪತ್ತಕ್ಕೂ ಹೆಚ್ಚಿನ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿದ್ದಾರೆ. ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಶ್ರೀ ಗುರುರಾಜ ಶೆಟ್ಟಿಯವರು ವಿಶೇಷ ಮುತುವರ್ಜಿ ವಹಿಸಿ ಆಯ್ದ ವಿದ್ಯಾರ್ಥಿಗಳನ್ನು ಅವರು ಕಲಿತಂತಹ ಪ್ರೌಢಶಾಲೆಗೆ ಕರೆದುಕೊಂಡು ಹೋಗಿ ಅಲ್ಲಿನ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ಶಿಕ್ಷಕಿಯರಿಗೆ ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆದು ಬರಲು ಅವಕಾಶ ಕಲ್ಪಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಕಿರಣ ಭಟ್ಟ, ಗಣಕವಿಜ್ಞಾನ ಉಪನ್ಯಾಸಕರಾದ ಗುರುರಾಜ ಶೆಟ್ಟಿ, ಹಾಗೂ ವಿಧಾತ್ರಿ ಅಕಾಡೆಮಿಯ ಪಿ. ಆರ್. ಒ. ನಿತೇಶ ಮೆಸ್ತಾ ಉಪಸ್ಥಿತರಿದ್ದರು.

ವಿಧಾತ್ರಿ ಅಕಾಡೆಮಿಯ ಈ ಕಾರ್ಯವನ್ನು ಎಲ್ಲಾ ಶಿಕ್ಷಕ ವೃಂದದವರು ಶ್ಲಾಘಿಸಿ, ಮೆಚ್ಚುಗೆಯ ನುಡಿಗಳನ್ನಾಡಿ ಸಂಸ್ಥೆಯ ಮುಂದಿನ ಬೆಳವಣಿಗೆಗೆ ಶುಭ ಹಾರೈಸಿದರು.