ಅಂಬೇವಾಡಿಯ ಆದರ್ಶ ವಿದ್ಯಾಲಯದ ಆವರಣದಲ್ಲಿ ಕುಸಿದು ಬಿದ್ದ ಸಿಬ್ಬಂದಿ : ಚಿಕಿತ್ಸೆಗೆ ಫಲಕಾರಿಯಾಗದೆ ಸಾವು

ದಾಂಡೇಲಿ : ನಗರದ ಅಂಬೇವಾಡಿಯ ಆದರ್ಶ ವಿದ್ಯಾಲಯದ ಆವರಣದಲ್ಲಿ ಶಾಲೆಯ ಮಹಿಳಾ ಸಿಬ್ಬಂದಿಯವರು ಕುಸಿದು ಬಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲಿ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.

ಆದರ್ಶ ಶಾಲೆಯ ಗುಮಾಸ್ತೆ ಹಾಗೂ ಸ್ಥಳೀಯ ಅಂಬೇವಾಡಿಯ ನಿವಾಸಿ ಸುಧಾ ಆರ್ ನಾಯ್ಕ ಎಂಬವರೇ ಮೃತಪಟ್ಟ ಮಹಿಳೆಯಾಗಿದ್ದಾರೆ. ಇವರು ಆದರ್ಶ ವಿದ್ಯಾಲಯದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದು, ಶಾಲೆಯ ಆವರಣದಲ್ಲಿರುವ ಸಂದರ್ಭದಲ್ಲಿ ಹೃದಯಘಾತಕ್ಕೊಳಗಾಗಿ ಕುಸಿದುಬಿದ್ದಿದ್ದಾರೆ. ತಕ್ಷಣವೇ ಇವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿದ್ದು, ಅಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲಿ ಸುಧಾ ಆರ್ ನಾಯ್ಕ್ ಅವರು ವಿಧಿವಶರಾಗಿದ್ದಾರೆ.

ಮೃತರಿಗೆ 50 ವರ್ಷ ವಯಸ್ಸಾಗಿತ್ತು. ಮೃತರು ಪತಿ ಹಾಗೂ ಒಬ್ಬಳು ಮಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ನಗರದ ಗಣ್ಯರನೇಕರು ಕಂಬನಿಯನ್ನು ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ.