ವಿಶ್ವವಿಖ್ಯಾತ ಮೈಸೂರು ದಸರಾ ಮೇಲೂ ಉಗ್ರರ ಕರಿನೆರಳು; ತುರ್ತಾಗಿ ಭದ್ರತೆ ಹೆಚ್ಚಿಸಿದ ಡಿಜಿ & ಐಜಿಪಿ ಅಲೋಕ್ ಮೋಹನ್

ಮೈಸೂರು, ಅ.22: ವಿಶ್ವವಿಖ್ಯಾತ ಮೈಸೂರು ದಸರಾ ಅದ್ದೂರಿಯಾಗಿ ನಡೆಯುತ್ತಿದೆ. ಈ ದೃಶ್ಯ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಹೀಗಾಗಿ ಈ ಬಾರಿ ಉಗ್ರರ ಕರಿನೆರಳು ಮೈಸೂರು ದಸರಾ ಮೇಲೆ ಬಿದ್ದಿದೆ. ಈ ಹಿನ್ನಲೆ ಎಚ್ಚೆತ್ತ ಪೊಲೀಸ್​ ಇಲಾಖೆ ತುರ್ತಾಗಿ ಭದ್ರತೆ ಹೆಚ್ಚಿಸಿದೆ. ಹೌದು, ಡಿಜಿ & ಐಜಿಪಿ ಅಲೋಕ್ ಮೋಹನ್  ಅವರು ತುರ್ತಾಗಿ ಇಂದು ಬೆಳಗ್ಗೆ 9 ಗಂಟೆಗೆ 1568 ಪೊಲೀಸರ ನಿಯೋಜನೆ ಮಾಡಿದ್ದು, ಜೊತೆಗೆ 40 CAR ತುಕಡಿಗಳು, 30 KSRP ತುಕಡಿಗಳನ್ನು ನಿಯೋಜಿಸಿದ್ದಾರೆ.

ನಾಡಹಬ್ಬ ದಸರಾ ಮೇಲೆಯೂ ಬಿತ್ತಾ ಉಗ್ರರ ಕರಿನೆರಳು?

ಪ್ರತಿ ಬಾರಿ ದಸರಾಗೆ 1700 ರಿಂದ 2000 ಪೊಲೀಸರ ನಿಯೋಜಿಸಲಾಗುತ್ತಿತ್ತು. ಈ ಬಾರಿ ಭದ್ರತೆಗೆ 3500ಕ್ಕೂ ಹೆಚ್ಚು ಪೊಲೀಸರು, ರಾಜ್ಯದ ಎಲ್ಲಾ ವಲಯ, ಸಿಐಡಿ, ಐಎಸ್​ಡಿಯಿಂದಲೂ ನಿಯೋಜನೆ ಮಾಡಲಾಗಿದೆ. ಶ್ರೀರಂಗಪಟ್ಟಣ, KRS ಪೊಲೀಸರಿಗೂ ಅಲರ್ಟ್ ಇರುವಂತೆ ಕೇಂದ್ರ ಗುಪ್ತಚರ ಇಲಾಖೆ ಸೂಚನೆ ನೀಡಿದೆ.

ಸುಮಾರು 70 ಜನರು ಅಕ್ರಮವಾಗಿ ದೇಶದೊಳಗೆ ನುಸುಳಿರುವ ಮಾಹಿತಿ

ಹೌದು, ನಕಲಿ ಪಾಸ್ ಪೋರ್ಟ್ ಪಡೆದು ಅಂದಾಜು 70 ಜನರು ಅಕ್ರಮವಾಗಿ ದೇಶದೊಳಗೆ ನುಸುಳಿರುವ ಮಾಹಿತಿಯನ್ನು ಕೇಂದ್ರ ಐಬಿ ಟೀಂ ಮಾಹಿತಿ ಕಲೆಹಾಕಿದೆ. ಒಂದು ಕಡೆ ಕ್ರಿಕೆಟ್ ಮ್ಯಾಚ್,  ಮತ್ತೊಂದು ಕಡೆ ದಸರಾ ಉತ್ಸವ ನಡೆಯುತ್ತಿದೆ. ಈ ಹಿನ್ನಲೆ ಕ್ರಿಕೆಟ್ ಜೊತೆಗೆ ದಸರಾಕ್ಕೂ ಬಂದೋಬಸ್ತ್ ಹೆಚ್ಚಿಸುವಂತೆ ಸೂಚಿಸಿದೆ.