ಅಮೃತ ಕಲಶ ಯಾತ್ರೆ ದೇಶಭಕ್ತಿಯ ಮೂಲಕ ಹೊಸ ಸಂಚಲನ ಮೂಡಿಸಿದೆ-ಪಿ.ಆರ್.ನಾಯ್ಕ

ಹೊನ್ನಾವರ: ದೇಶದ ಪ್ರಧಾನ ಮಂತ್ರಿಯವರು ಮನ್ ಕಿ ಬಾತ್ ನಲ್ಲಿ ಕರೆ ನೀಡಿದಂತೆ ಅಮೃತ ಕಲಶ ಯಾತ್ರೆ ದೇಶಭಕ್ತಿಯ ಮೂಲಕ ಹೊಸ ಸಂಚಲನ ಮೂಡಿಸಿದೆ ಎಂದು ಸಾಹಿತಿಗಳು ಜಿಲ್ಲಾ ಕಸಾಪ ಸಂಘದ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ಹೇಳಿದರು.

ಜಿಲ್ಲಾಡಳಿತ , ತಾಲೂಕ ಆಡಳಿತ , ತಾಲೂಕ ಪಂಚಾಯತಿ , ನೆಹರು ಯುವ ಕೇಂದ್ರ, ಪಟ್ಟಣ ಪಂಚಾಯತಿ ಇವರ ಸಂಯುಕ್ತ ಅಶ್ರಯದಲ್ಲಿ ಪ.ಪಂ.ಸಭಾಭವನದಲ್ಲಿ ಮಂಗಳವಾರ ಜರುಗಿದ “ನನ್ನ ಮಣ್ಣು ನನ್ನ ದೇಶ ” ಅಭಿಯಾನದಡಿ ಅಮೃತ ಕಲಶ ಯಾತ್ರೆ ಅಭಿಯಾನದ ಕುರಿತು ಉಪನ್ಯಾಸದಲ್ಲಿ ಅವರು ನುಡಿದರು. ದೇಶದೆಲ್ಲಡೆಯ ಮಣ್ಣು ಸಂಗ್ರಹಿಸಲಾಗುತ್ತಿದೆ. ಏಕ ಭಾರತ ಶೇಷ್ಠ ಭಾರತ ಧ್ಯೇಯ ಇದರಲ್ಲಿದೆ. ಮಣ್ಣನ್ನು ನಾವು ಪೂಜಿಸಿ ಗೌರವಿಸುತ್ತೇವೆ. ವೀರ ಯೋಧರ ಸ್ಮರಣೆಯಲ್ಲಿ ನಿರ್ಮಾಣವಾಗುವ ಸ್ಥಳದಲ್ಲಿ ದೇಶದೆಲ್ಲಡೆ ಪವಿತ್ರ ಮಣ್ಣು ಒಂದಡೆ ಸೇರಿಸುವ ಉದ್ದೇಶದಿಂದ ಈ ಅಭಿಯಾನ ನಡೆಯುತ್ತಿದೆ ಎಂದು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ನಿಕಟಪೂರ್ವ ಪ.ಪಂ.ಅಧ್ಯಕ್ಷೆ ಭಾಗ್ಯ ಮೇಸ್ತ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.ತಾಲೂಕಿನ ವಿವಿಧಡೆ ಸಂಗ್ರಹಿಸಿದ ಮಣ್ಣನ್ನು ಇದೇ ವೇಳೆ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.
ಜಿಲ್ಲಾ ನೆಹರು ಯುವಕೇಂದ್ರ ಸಂಯೋಜಕರಾದ ಯಶವಂತ ಯಾದವ್ ಮಾತನಾಡಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಈ ಕಾರ್ಯಕ್ರಮ ಯಶ್ವಸಿಯಾಗುತ್ತಿದೆ. ಹೊನ್ನಾವರದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಕಾರ್ಯಕ್ರಮ ಆಯೋಜನೆ ಆದರು ಯಶ್ವಸಿಯಾಗಿ‌ ನಡೆದಿದೆ. ಸರ್ಕಾರದ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರು, ಇಲಾಖೆಯ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿ ಯಶ್ವಸಿಯಾಗಿಸುವಲ್ಲಿ ಸಹಕರಿಸಿದ್ದೀರಿ. ದೇಶ ನಮಗೇನು ನೀಡಿದೆ ಹೇಳುವುದರ ಮೊದಲು ದೇಶಕ್ಕೆ ನಾವು ಏನು ನೀಡಿದ್ದೇವೆ ಎನ್ನುವುದನ್ನು ಯೋಚಿಸಿ ನಮ್ಮ ಕರ್ತವ್ಯವನ್ನು ಪಾಲಿಸಬೇಕು. ಇಂದು ಇಸ್ರೇಲ್ ಯುದ್ದದಲ್ಲಿ ಅಲ್ಲಿಯ ಜನರ ದೇಶಭಕ್ತಿಯು ಜಗತ್ತಿನ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇ.ಓ. ಸುರೇಶ ನಾಯ್ಕ ಮಾತನಾಡಿ ರಾಷ್ಟ್ರವನ್ನು ಮಾತೃಭೂಮಿಯಂತೆ ಕಾಣುವ ನಾವು, ಮಣ್ಣನ್ನು ಭಕ್ತಿಯಿಂದ ಪೂಜಿಸಿ ಗೌರವಿಸುತ್ತೇವೆ. ದೇಶದ ವಿಚಾರಕ್ಕೆ ಬಂದಾಗ ನಾವೆಲ್ಲ ಒಟ್ಟಾಗಿ ಗೌರವದಿಂದ ನೋಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿಯೂ ಸ್ಥಳಿಯ ಜನಪ್ರತಿನಿಧಿಗಳು, ಅಧಿಕಾರಿಗಳು ಸಾರ್ವಜನಿಕರು ಮಣ್ಣು ಸಂಗ್ರಹಿಸಿ ನೀಡಿದ್ದಾರೆ ಎಂದರು.

ವೇದಿಕೆಯಲ್ಲಿ ಕೆಳಗಿನೂರು ಗ್ರಾ.ಪಂ.ಅಧ್ಯಕ್ಷೆ ಚಿತ್ರಾಕ್ಷಿ ಗೌಡ ಪ.ಪಂ.ಸದಸ್ಯ ತಾರಾ ಕುಮಾರಸ್ವಾಮಿ, ಬಿ.ಇ.ಓ. ಜಿ.ಎಸ್.ನಾಯ್ಕ, ಮಂಕಿ ಪ.ಪಂ.ಮುಖ್ಯಾಧಿಕಾರಿ ಅಕ್ಷತಾ, ವಿವಿಧ ಇಲಾಖೆಯ ಅಧಿಕಾರಿಗಳು, ಸಂಜೀವಿನಿ ಸಂಘದ ಸದಸ್ಯರು ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮಕ್ಕೆ ಮೊದಲು ಚಂಡೆ ನೃತ್ಯದಲ್ಲಿ ನೂರಾರು ಸಂಖ್ಯೆಯಲ್ಲಿ ತಹಶೀಲ್ದಾರ ರವಿರಾಜ್ ದಿಕ್ಷೀತ್, ವಿವಿಧ ಇಲಾಖೆಯ ಅಧಿಕಾರಿಗಳ ನೇತ್ರತ್ವದಲ್ಲಿ ಜಾಗೃತಿ ಜಾಥಾ ಪಟ್ಟಣದ ವಿವಿಧಡೆ ನಡೆಸಿದರು.