ಗೌರಮ್ಮಜ್ಜಿ ಮನೆ ಕುಸಿತ ದುರಂತ: ನಾಲ್ವರ ಮೃತದೇಹ ಹೊರಕ್ಕೆ ತೆಗೆದ ರಕ್ಷಣಾ ತಂಡ

ಭಟ್ಕಳ: ಗೌರಮ್ಮಜ್ಜಿ ಮನೆ ಕುಸಿತ ದುರಂತದಲ್ಲಿ ಮನೆಯಲ್ಲಿದ್ದ ನಾಲ್ವರೂ ಸಾವನ್ನಪ್ಪಿದ ಬಗ್ಗೆ ಇದೀಗ ದೃಢಪಟ್ಟಿದ್ದು ನಾಲ್ವರ ಮೃತದೇಹವನ್ನೂ ಹೊರತೆಗೆಯಲಾಗಿದೆ. ಲಕ್ಷ್ಮಿ ನಾರಾಯಣ ನಾಯ್ಕ (48), ಲಕ್ಷ್ಮಿ ನಾಯ್ಕ (33), ಅನಂತ ನಾರಾಯಣ ನಾಯ್ಕ (32) ಹಾಗೂ ಪ್ರವೀಣ ಬಾಲಕೃಷ್ಣ ನಾಯ್ಕ (20) ಗುಡ್ಡ ಕುಸಿತದಲ್ಲಿ ಮೃತಪಟ್ಟ ದುರ್ದೈವಿಗಳು.

ಅಗ್ನಿಶಾಮಕ ಸಿಬ್ಬಂದಿ, ಎನ್ ಡಿ ಆರ್ ಎಫ್ ತಂಡ, ಪೊಲೀಸರು ಹಾಗೂ ಸ್ಥಳೀಯರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳಕ್ಕೆ ಬುಲ್ಡೋಜರ್ ಹೋಗಲು ಸಾಧ್ಯವಾಗದೇ ಇದ್ದುದರಿಂದ ಕಾರ್ಯಾಚರಣೆಗೆ ತೊಂದರೆಯುಂಟಾಯಿತು.

ಇಂದು ಬೆಳ್ಳಂಬೆಳಗ್ಗೆ ಸುರಿದ ರಣಭೀಕರ ಮಳೆಗೆ ಮುಟ್ಟಳ್ಳಿ ಗ್ರಾಮದಲ್ಲಿ ಗುಡ್ಡಕುಸಿದು ಗೌರಮ್ಮಜ್ಜಿ ಮನೆ ನೆಲಸಮವಾಗಿತ್ತು. ನಾಲ್ವರು ಮನೆಯಲ್ಲಿ ಸಿಲುಕಿಕೊಂಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾಗಿ ಸ್ಥಳೀಯರ ಸಹಾಯದಿಂದ ಕಾರ್ಯಾಚರಣೆ ನಡೆಸಲಾಯ್ತು. ಇದೀಗ ಮನೆಯಲ್ಲಿದ್ದ ನಾಲ್ವರೂ ಸಾವನ್ನಪ್ಪಿದ್ದು ಎಲ್ಲರ ಮೃತದೇಹಗಳನ್ನೂ ಹೊರಕ್ಕೆ ತೆಗೆಯಲಾಗಿದೆ.