ಸಿದ್ದಾಪುರದಲ್ಲಿ ಮಳೆ ಆರ್ಭಟಕ್ಕೆ ಹೊಳೆಯಂತಾದ ರಸ್ತೆಗಳು.!

ಸಿದ್ದಾಪುರ: ಕಳೆದ ಎರಡು ವಾರಗಳಿಂದ ಸೈಲೆಂಟ್ ಆಗಿದ್ದ ಮಳೆರಾಯ ಸೋಮವಾರ ಮತ್ತೆ ಅಬ್ಬರಿಸಿದ್ದಾನೆ. ವರುಣನ ಆರ್ಭಟಕ್ಕೆ ಸಿದ್ದಾಪುರ ಪಟ್ಟಣದ ಹಲವು ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯುಂಟಾಯಿತು.

ಪಟ್ಟಣದ ಮುಖ್ಯ ರಸ್ತೆಯ ಹೊಸೂರಿನ ವರ್ಷಾ ಆಸ್ಪತ್ರೆ ಎದುರು ರಸ್ತೆಯ ಮೇಲೆ ನೀರು ನಿಂತು ಬೈಕ್ ಸವಾರರು ಹಾಗೂ ದಾರಿಹೋಕರ ಮೈಗೆ ಕೆಸರಿ ಅಭಿಷೇಕವಾಯಿತು. ಪಟ್ಟಣ ಪಂಚಾಯತ ಸರಿಯಾಗಿ ಚರಂಡಿ ನಿರ್ವಹಣೆ ಮಾಡದ ಕಾರಣ ಗಟಾರದೊಳಗೆ ಹೋಗಬೇಕಾದ ನೀರು ರಸ್ತೆ ಮೇಲೆ ಹರಿದು ಹೊಳೆಯಂತಾಗಿತ್ತು. ಜೊತೆಗೆ ಸಾಗರ್ ಕ್ರಾಸ್ ಸಮೀಪದ ರಸ್ತೆಯಲ್ಲೂ ಕೂಡಾ ನೀರು ನಿಂತು ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಯಿತು. ಚರಂಡಿ ಸರಿಯಾಗಿ ನಿರ್ವಹಣೆ ಮಾಡದ ಆಡಳಿತ ವ್ಯವಸ್ಥೆಗೆ ಸ್ಥಳೀಯ ನಿವಾಸಿಗಳು ಅಸಮಧಾನ ವ್ಯಕ್ತಪಡಿಸಿದರು.