ಸರಸ್ವತಿ ವಿದ್ಯಾ‌ಕೇಂದ್ರದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ “ಕಸದಿಂದ ರಸ” ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ಕಾರ್ಯಾಗಾರ

ಕುಮಟಾ : ನಿರುಪಯುಕ್ತ ವಸ್ತುಗಳೆಂದು ಬಿಸಾಡುವ ಹಳೆಯ ಬಾಟಲಿಗಳು, ಪೆನ್ನು, ಬರೆದ ಕಾಗದಗಳು, ಕೆತ್ತಿದ ಪೆನ್ಸಿಲ್ ನ ಕಸ, ಕರಟಗಳು, ವಿವಿಧ ಧಾನ್ಯಗಳ ಹೊರಪದರಗಳು, ಶೇಂಗಾ ಸಿಪ್ಪೆ, ಪೇಪರ್ ಗಳು, ಐಸ್ ಕ್ರೀಮ್ ಕಪ್ಪುಗಳು, ಐಸ್ ಕ್ರೀಮ್ ಚಮಚಗಳು, ಕಡ್ಡಿಗಳು, ಉರಿದ ನಂತರ ಉಳಿಯುವ ಬೆಂಕಿಕಡ್ಡಿ, ಬೆಂಕಿ ಪೊಟ್ಟಣ ಹೀಗೆ ಹತ್ತು ಹಲವು ವಸ್ತುಗಳನ್ನು ಉಪಯೋಗಿಸಿ ವಿದ್ಯಾರ್ಥಿಗಳು ತಮ್ಮ ಕ್ರಿಯಾಶೀಲತೆಯ ಮೂಲಕ ವಿವಿಧ ಮಾದರಿಗಳನ್ನು ತಯಾರಿಸಿ ಗಮನ ಸೆಳೆದರು. ವಿದ್ಯಾರ್ಥಿಗಳು ತಯಾರಿಸಿದ ಬಗೆ ಬಗೆಯ ವಸ್ತುಗಳನ್ನು ಗಮನಿಸಿದ ಶಿಕ್ಷಕರು, ಪಾಲಕರು ಹಾಗೂ ಇನ್ನುಳಿದ ತರಗತಿಯ ವಿದ್ಯಾರ್ಥಿಗಳು ಕಸದಿಂದ ಹೀಗೆಯೂ ಮಾಡಬಹುದೇ ಎಂದು ಆಶ್ಚರ್ಯಪಟ್ಟರು. ಇವೆಲ್ಲವೂ ನಡೆದಿದ್ದು, ಕುಮಟಾ ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾ ಕೇಂದ್ರ ಪ್ರಾಥಮಿಕ ಶಾಲೆಯಲ್ಲಿ.

ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಜೊತೆಗೆ ನಿರುಪಯುಕ್ತವೆಂದು ಎಸೆಯುವ ವಸ್ತುಗಳನ್ನು ಸದುಪಯೋಗ ಪಡಿಸಿಕೊಳ್ಳುವುದರ ಬಗ್ಗೆ ಮಾರ್ಗದರ್ಶನ ನೀಡುವ ದೃಷ್ಟಿಯಿಂದ ಆಯೋಜನೆಗೊಂಡಿದ್ದ ‘ಕಸದಿಂದ ರಸ’ ಹಾಗೂ ಕ್ರಾಫ್ಟ್ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಚಟುವಟಿಕೆಯಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿಕೊಂಡು ವಿವಿಧ ಬಗೆಯ ವಸ್ತುಗಳನ್ನು ತಯಾರಿಸಿ ಗಮನಸೆಳೆದರು. ನಾಲ್ಕನೇ ವರ್ಗದ ವಿದ್ಯಾರ್ಥಿಗಳು ಮನೆಯಲ್ಲಿ ಬಿಸಾಡಿದ ಕಸದಿಂದ ತಯಾರಿಸಿ ತಂದ ಹಲವು ವಸ್ತುಗಳು ವಿದ್ಯಾರ್ಥಿಯ ಕ್ರಿಯಾಶೀಲತೆಯನ್ನು ಅನಾವರಣಗೊಳಿಸುವುದರ ಜೊತೆಗೆ ಪರಿಸರ ಕಾಳಜಿಯ ಬಗ್ಗೆಯೂ ಪಾಠ ಮಾಡುವಂತಿತ್ತು.

ಕರಟಗಳಿಂದ ತಯಾರಿಸಿದ ಗೊಂಬೆಗಳು, ವಸ್ತ್ರದ ಮುಡೆಯಿಂದ ತಯಾರಿಸಿದ ಗೊಂಬೆಗಳು, ವಿವಿಧ ಪ್ರಾಣಿಗಳ ಮಾದರಿಗಳು, ಮನೆ, ವಾಚನಾಲಯ, ಹೂವುಗಳು, ವಾಟರ್ ಫಿಲ್ಟರ್ ಮಾದರಿ, ಎಟಿಎಂ ನ ಮಾದರಿ, ಟೇಬಲ್ ಖುರ್ಚಿ ಮಾದರಿ, ಸೈಕಲ್,ಹೂ ಬುಟ್ಟಿ, ಗರತಿಗಳಿಂದ ತಯಾರಿಸಿದ ಪೆನ್ನಿನ ಸ್ಟಾಂಡ್ ಗಳು, ಸೋಲಾರ್ ಮಾದರಿ, ಈಗ್ಲೂ ಕಟ್ಟಡಗಳು, ವಿವಿಧ ಅಲಂಕಾರಿಕ ವಸ್ತುಗಳು, ಪೂಜಾ ಸಾಮಗ್ರಿಗಳು, ಮೊಟ್ಟೆಯಿಂದ ತಯಾರಿಸಿದ ಡಾಲ್ ಗಳು, ಹೂ ಬುಟ್ಟಿಗಳು, ಮರದ ಮಾದರಿ ಮಕ್ಕಳ ಕೈಗಳಿಂದ ರಚನೆಯಾಗಿ ನೋಡುಗರನ್ನು ಆಕರ್ಷಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ನಾಲ್ಕನೇ ತರಗತಿಯ ಇಶಾ ಭಂಡಾರಿ ಕಸವೆಂದು ಮನೆಯಲ್ಲಿ ಎಸೆದಿರುವ ವಸ್ತುಗಳನ್ನು ಎತ್ತಿ ತಂದು ಅವುಗಳಿಂದ ವಿವಿಧ ಮಾದರಿ ತಯಾರಿಸುವ ಈ ಚಟುವಟಿಕೆಯನ್ನು ನಮ್ಮ ಶಾಲೆಯಲ್ಲಿ ನೀಡಿದ್ದು ನಮ್ಮೆಲ್ಲರಿಗೆ ಸಂತಸ ತಂದಿದೆ. ಪರಿಸರ ರಕ್ಷಣೆಯ ಬಗ್ಗೆಯೂ ಇದು ಪಾಠ ಮಾಡುತ್ತದೆ. ನಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಇಂತಹ ಚಟುವಟಿಕೆಗಳನ್ನು ನಮ್ಮ ಶಿಕ್ಷಕರು ಆಯೋಜಿಸುತ್ತಿರುವುದು ನಮಗೆ ಸಂತಸ ತರುತ್ತದೆ ಎಂದಳು.

ಸಾವಿರಾರು ವಿದ್ಯಾರ್ಥಿಗಳು ಈ ವಸ್ತು ಪ್ರದರ್ಶನವನ್ನು ನೋಡಿ ಸಂತಸಪಟ್ಟರು. ವಸ್ತುಗಳನ್ನು ತಯಾರಿಸಿದ ವಿದ್ಯಾರ್ಥಿಗಳು ವಸ್ತುಗಳ ತಯಾರಿಕೆಯ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು. ಮುಖ್ಯ ಶಿಕ್ಷಕಿ ಸುಜಾತಾ ನಾಯ್ಕ, ಶಿಕ್ಷಕ ವೃಂದದವರು ಪಾಲಕರು ಹಾಗೂ ಶಾಲೆಗೆ ಭೇಟಿನೀಡಿದ ಕೆಲವು ಸಾರ್ವಜನಿಕರೂ ಈ ವಸ್ತುಪ್ರದರ್ಶನ ಕಂಡು ಸಂತಸ ವ್ಯಕ್ತಪಡಿಸಿದರು.