ಯಲ್ಲಾಪುರ: ನೂಲು ಹುಣ್ಣಿಮೆ ನಿಮಿತ್ತ ಶಾರದಾಂಬಾ ದೇವಾಲಯದಲ್ಲಿ ಯಜ್ಞೋಪವೀತ ಧಾರಣ

ಯಲ್ಲಾಪುರ: ಶ್ರೀಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶಾಖಾಮಠವಾದ ಯಲ್ಲಾಪುರ ಪಟ್ಟಣದ ನಾಯಕನಕೆರೆಯ ಶಾರದಾಂಬಾ ದೇವಾಲಯದಲ್ಲಿ ನೂಲು ಹುಣ್ಣಿಮೆಯ ನಿಮಿತ್ತ ಬುಧವಾರ ಬೆಳಿಗ್ಗೆ ಯಜ್ಞೋಪವೀತ ಧಾರಣ ಕಾರ್ಯಕ್ರಮ ನಡೆಯಿತು. ಈ ನಿಮಿತ್ತ ಬೆಳಿಗ್ಗೆ ದೇವಾಲಯದಲ್ಲಿ ಗಣೇಶಪೂಜೆ, ಪುಣ್ಯಾಹ, ಉಪಾಕರ್ಮ ಹವನ ನಡೆಯಿತು. ದೇವಾಲಯದ ಅರ್ಚಕ ವೇ.ಗೋಪಾಲಕೃಷ್ಣ ಭಟ್ಟ ಕುಂಕಿಪಾಲ ಹಾಗೂ ಶಾರದಾಂಬಾ ಪಾಠಶಾಲೆಯ ಅಧ್ಯಾಪಕರಾದ ವೇ.ವಿಶ್ವನಾಥ ಭಟ್ಟ ಅವರ ನೇತ್ರತ್ವದಲ್ಲಿ ನಡೆದ ಯಜ್ಞೋಪವೀತ ಧಾರಣ ವಿಧಿ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.
ದೇವಾಲಯದ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಜಗದೀಶ ದೀಕ್ಷಿತ್, ಕಾರ್ಯದರ್ಶಿ ನರಸಿಂಹ ಗೇರಗದ್ದೆ, ವ್ಯವಸ್ಥಾಪಕ ಎನ್.ಎಸ್.ಭಟ್ ಪ್ರಮುಖರಾದ ಸುಬ್ರಹ್ಮಣ್ಯ ಹೆಗಡೆ, ಜಿ.ಎನ್.ಭಟ್ ತಟ್ಟಿಗದ್ದೆ, ಶ್ರೀಪಾದ ಭಟ್ಟ, ಪ್ರಸನ್ನ ಭಟ್ಟ ಮುಂತಾದವರು ಇದ್ದರು.