ಆಟವಾಡುತ್ತಾ ಬಾವಿಯಲ್ಲಿ ಬಿದ್ದು 3 ವರ್ಷದ ಬಾಲಕಿ ದಾರುಣ ಸಾವು

ಕಾರವಾರ: ಬಾವಿಯಲ್ಲಿ ಕಾಲು ಜಾರಿ ಬಿದ್ದು 3 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಹರಿದೇವ ನಗರದಲ್ಲಿ ಈ ದುರ್ಘಟನೆ ನಡೆದಿದೆ. ಸ್ತುತಿ (3) ಮೃತ ದುರ್ದೈವಿ.

ಮನೆಯ ಬಳಿ ಆಟವಾಡುತ್ತಿದ್ದ ಸ್ತುತಿ, ಗಣಪತಿ ಮೂರ್ತಿ ಎಂದು ಮಣ್ಣನ್ನು ಬಾವಿಯಲ್ಲಿ ಹಾಕಲು ಮುಂದಾಗಿದ್ದಾಳೆ. ಈ ವೇಳೆ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ.

ಇತ್ತ ಮನೆ ಮುಂದೆ ಆಟವಾಡುತ್ತಿದ್ದ ಮಗು ಕಾಣದೆ ಇದ್ದಾಗ ಗಾಬರಿಗೊಂಡ ಪೋಷಕರು ಸುತ್ತಮುತ್ತ ಹುಡುಕಾಡಿದ್ದಾರೆ. ಆದರೆ, ಎಲ್ಲಿ ಹುಡುಕಿದರೂ ಕಾಣಿಸಲಿಲ್ಲ. ಬಡಾವಣೆಯ ನಿವಾಸಿಗಳೆಲ್ಲ ಹುಡುಕಾಡುವಾಗ ಕೊನೆಗೆ ಬಾವಿಯೊಳಗೆ ಇಣುಕಿ ನೋಡಿದ್ದಾರೆ. ಆಗ ಬಾವಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.

ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಮಗು ಉಸಿರುಗಟ್ಟಿ ಮೃತಪಟ್ಟಿದೆ. ಸ್ಥಳಕ್ಕೆ ಕಾರವಾರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ಇತ್ತ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.