ದಿವಂಗತ ಡಿ.ದೇವರಾಜ ಅರಸುರವರ 108ನೇ ಜನ್ಮ ದಿನಾಚರಣೆ & ಸದ್ಭಾವನಾ ದಿನಾಚರಣೆ

ದಾಂಡೇಲಿ : ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸುರವರ 108ನೇ ಜನ್ಮ ದಿನಾಚರಣೆ & ಸದ್ಭಾವನಾ ದಿನಾಚರಣೆ ಕಾರ್ಯಕ್ರಮವನ್ನು ದಾಂಡೇಲಿ ನಗರ ಸಭೆಯ ಸಭಾಭವನದಲ್ಲಿ ಭಾನುವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ದಿವಂಗತ ಡಿ.ದೇವರಾಜ ಅರಸುರವರ ಭಾವಚಿತ್ರಕ್ಕೆ ಪುಷ್ಪಗೌರವವನ್ನು ಸಲ್ಲಿಸಲಾಯ್ತು.

ಆನಂತರ ಮಾತನಾಡಿದ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರು ಡಿ.ದೇವರಾಜು ಅರಸುರವರು ಸಾಮಾಜಿಕ ನ್ಯಾಯ ಒದಗಿಸಲು ಬಗರ ಹುಕುಂ ಸಾಗುವಳಿಕೆ ಪದ್ಧತಿ ಜಾರಿಗೆ ತಂದಿದ್ದು ಒಂದು ಐತಿಹಾಸಿಕ ಮತ್ತು ಕ್ರಾಂತಿಕಾರಿ ನಿರ್ಣಯವಾಗಿದೆ. ಇದರಿಂದ ದೀನ ದಲಿತರು, ಬಡವರು ಮತ್ತು ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಸದ್ಭಾವನಾ ದಿನಾಚರಣೆಯ ಪ್ರಯುಕ್ತ ಪ್ರತಿಜ್ಞಾ‌ ವಿಧಿ ಬೋಧಿಸಿ ಮಾತನಾಡಿದ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರು ದಿ. ಡಿ.ದೇವರಾಜ ಅರಸು ಅವರು ಹಿಂದುಳಿದ ವರ್ಗದವರ ಧ್ವನಿಯಾಗಿದ್ದರು. ಎಲ್ಲರಿಗೂ ಸಮಬಾಳು ಸಮಪಾಲು ನೀಡುವುದು ಅವರ ಆಶಯವಾಗಿತ್ತು ಎಂದರು.

ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರುಗಳಾದ ಸರಸ್ವತಿ ರಜಪೂತ್, ಯಾಸ್ಮಿನ್ ಕಿತ್ತೂರ್, ನಂದೀಶ್ ಮುಂಗರವಾಡಿ, ಮಜಿದ್ ಸನದಿ, ದಶರಥ್ ಬಂಡಿವಡ್ಡರ, ಮಹಾದೇವ ಜಮಾದಾರ, ನಗರ ಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು