ಮಂಡ್ಯ: ಅನುಮಾನ ಎನ್ನುವ ಭೂತಕ್ಕೆ ಹೆಂಡ್ತಿಯನ್ನು ಕೊಂದ ಪತಿ, ಮಗನೊಂದಿಗೆ ಎಸ್ಕೇಪ್

ಮಂಡ್ಯ, ಆ.16: ಪತಿಯೇ ಪತ್ನಿಯ ಶೀಲ ಶಂಕಿಸಿ  ಕೊಲೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಟಿಬಿ ಬಡಾವಣೆಯಲ್ಲಿ ನಡೆದಿದೆ. ಮಧುಶ್ರಿ (25) ಕೊಲೆಯಾಗಿರುವ ಮಹಿಳೆ. ಕಳೆದ ಒಂದುವರೆ ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಧುಶ್ರೀ ಕುಟುಂಬ. ಮಂಡ್ಯ ತಾಲೂಕಿನ ಕರಡಹಳ್ಳಿ ಗ್ರಾಮದ ಮಂಜುನಾಥ್ ಜೊತೆ ಕಳೆದ ನಾಲ್ಕೈದು ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ 4 ವರ್ಷದ ಗಂಡು ಮಗುವಿದ್ದು, ಮಂಜುನಾಥ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸುಖವಾಗಿದ್ದ ಸಂಸಾರದಲ್ಲಿ ಅನುಮಾನ ಎಂಬ ಭೂತಕ್ಕೆ ಸುಂದರ ಕುಟುಂಬ ನುಚ್ಚು ನೂರಾಗಿದೆ.

ಪತಿ ಪತ್ನಿ ನಡುವೆ ಜಗಳ

ಇನ್ನು ನಿನ್ನೆ(ಆ.15) ಮಧ್ಯಾಹ್ನ ಮಂಜುನಾಥ್ ಬೆಂಗಳೂರಿನಿಂದ ಬಂದಿದ್ದ. ಈ ವೇಳೆ ಮಂಜುನಾಥ್​ ಹಾಗೂ ಮಧುಶ್ರೀ ನಡುವೆ ಜಗಳ ಶುರುವಾಗಿದೆ. ಬಳಿಕ ಪತ್ನಿಯ ಶೀಲ ಶಂಕಿಸಿ ಮಧುಶ್ರೀಯನ್ನು ಕೊಲೆ ಮಾಡಿ, ಮಗ ಮನ್ವಿತ್ ಕರೆದುಕೊಂಡು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇಂದು(ಆ.16) ಬೆಳಿಗ್ಗೆ ಮಧು ಎಂಬಾತ ಮನೆ ಬಳಿ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ನಾಗಮಂಗಲ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನುಮಾನಕ್ಕೆ ಒಂದು ಜೀವ ಬಲಿಯಾಗಿದೆ.