ಹಳಿಯಾಳ ತಾಲ್ಲೂಕಿನ ಮಂಗಳವಾಡದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮಂಗೇಶ್ ಪಾಟೀಲ್ ಅವರಿಗೆ ಜಿಲ್ಲಾಡಳಿತದಿಂದ ಸನ್ಮಾನ

ಹಳಿಯಾಳ : ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡ ಸ್ವಾತಂತ್ರ್ಯ ಹೋರಾಟಗಾರರಾದ ಹಳಿಯಾಳ ತಾಲ್ಲೂಕಿನ ಮಂಗಳವಾಡದ ಮಂಗೇಶ್ ಪಾಟೀಲ್ ಅವರನ್ನು ಉತ್ತರ ಕನ್ನಡ ಜಿಲ್ಲಾಡಳಿತದ ಪರವಾಗಿ ಬುಧವಾರ ಸನ್ಮಾನಿಸಲಾಯ್ತು.

ಜಿಲ್ಲಾಡಳಿತದ ಪರವಾಗಿ ಸಹಾಯಕ ಆಯುಕ್ತೆ ಜಯಲಕ್ಷ್ಮೀ ರಾಯಕೋಡ ಅವರು ಮಂಗೇಶ್ ಪಾಟೀಲ್ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿ, ದೇಶಕ್ಕಾಗಿ ತಮ್ಮ ಪ್ರಾಣವನ್ನೆ ಒತ್ತೆ ಇಟ್ಟು ಹೋರಾಟ ಮಾಡಿದ ಅಪೂರ್ವ ವ್ಯಕ್ತಿಗಳನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅಂದು ನಿಮ್ಮಂತವರು ಹೋರಾಟ ಮಾಡಿದ ಫಲವಾಗಿ ಇಂದು ನಾವೆಲ್ಲರೂ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗಿದೆ ಎಂದು ಭಗವಂತ ನಿಮಗೆ ಆಯುರಾರೋಗ್ಯವನ್ನು ಸದಾ ದಯಾಪಾಲಿಸಲೆಂದು ಮಂಗೇಶ್ ಪಾಟೀಲ್ ಅವರಿಗೆ ಶುಭ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಹಳಿಯಾಳ ಗ್ರೇಡ್ 2 ತಹಶೀಲ್ದಾರ್ ರತ್ನಾಕರ್, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಪರಶುರಾಮ ಗಸ್ತೆ, ಕಂದಾಯ ನಿರೀಕ್ಷಕರಾದ ಅನಿಲ್ ಹಾಗೂ ಇತರ ಸಿಬ್ಬಂದಿಗಳು ಮತ್ತು ಸ್ಥಳೀಯ ಗ್ರಾಮ ಪಂಚಾಯ್ತು ಸದಸ್ಯರು ಉಪಸ್ಥಿತರಿದ್ದರು.