ಬೆಳ್ಳಿ ಗೆದ್ದ ಬಿಂದ್ಯಾರಾಣಿಗೆ ಗಣ್ಯರಿಂದ ಅಭಿನಂದನೆ

ನವದೆಹಲಿ: ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ವೇಟ್‌ಲಿಫ್ಟರ್ ಬಿಂದ್ಯಾರಾಣಿ ದೇವಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ, ಕೇಂದ್ರ ಸಚಿವ ಕಿರಣ್ ರಿಜಿಜು ಸೇರಿದಂತೆ ಅನೇಕ ಗಣ್ಯರು ಅಭಿನಂದಿಸಿದ್ದಾರೆ.

ಕಾಮನ್‌ವೆಲ್ತ್ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಬಿಂದ್ಯಾರಾಣಿ ಅವರಿಗೆ ಅಭಿನಂದಿಸಿದ ಮೋದಿ, ಈ ಸಾಧನೆಯು ಸದೃಢತೆಯ ದ್ಯೋತಕವಾಗಿದೆ. ಅವರ ಸಾಧನೆ ಪ್ರತಿಯೊಬ್ಬ ಭಾರತೀಯರಿಗೂ ತುಂಬಾ ಸಂತಸ ನೀಡಿದೆ. ಬಿಂದ್ಯಾರಾಣಿ ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡಲೆಂದು ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ.

ಶನಿವಾರ ನಡೆದ ಮಹಿಳೆಯರ ವೇಟ್‌ಲಿಫ್ಟಿಂಗ್‌ನ 55 ಕೆ.ಜಿ. ವಿಭಾಗದಲ್ಲಿ ಒಟ್ಟು 202 ಕೆ.ಜಿ ಭಾರ ಎತ್ತುವ ಮೂಲಕ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು. ಇದು ಸಿಡಬ್ಲ್ಯುಜಿಯಲ್ಲಿ ಬಿಂದ್ಯಾರಾಣಿ ತೋರಿದ ಶ್ರೇಷ್ಠ ಸಾಧನೆಯಾಗಿದೆ. ನೈಜೀರಿಯಾದ ಆದಿಜತ್ ಅಡೆನಿಕೆ ಒಲರಿನೊಯ್ ಅವರು ಒಟ್ಟು 203 ಕೆಜಿ ಎತ್ತುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದಾರೆ.