ದಾಂಡೇಲಿ ನಗರದಲ್ಲಿ ಸರಣಿ ಕಳ್ಳತನ; ಲಕ್ಷಾಂತರ ರೂಪಾಯಿ ಕಳವು

ದಾಂಡೇಲಿ : ನಗರದ ಲಿಂಕ್ ರಸ್ತೆಯಲ್ಲಿ ಸರಣಿ ಕಳ್ಳತನ ಘಟನೆ ನಡೆದಿದ್ದು, ಲಕ್ಷಾಂತರ ರೂಪಾಯಿ ನಗದು ದೋಚಿದ್ದಾರೆ

ಅಭಿಷೇಕ್ ಕಾಳೆ ಮಾಲಿಕತ್ವದ ಮೆಡಿಕಲ್ ಅಂಗಡಿಯ ಮೇಲ್ಛಾವಣಿಯ ಸೀಟು ಒಡೆದು ಒಳ ನುಗ್ಗಿದ ಕಳ್ಳರು, ಅಂಗಡಿ ಒಳಗಿದ್ದ ಸುಮಾರು 4 ಲಕ್ಷ ರೂಪಾಯಿ ನಗದನ್ನ ದೋಚಿದ್ದಾರೆ. ಇದೇ ಕಟ್ಟಡದಲ್ಲಿರುವ ಪಕ್ಕದ ಶರಣ್ ಸಿ. ಅರಳಿಯವರ ಕಿರಾಣಿ ಅಂಗಡಿಗೂ ನುಗ್ಗಿ 45 ರಿಂದ 50 ಸಾವಿರ ರೂಪಾಯಿ ನಗದನ್ನು ಕದ್ದೋಯ್ದಿದ್ದಾರೆ.

ಅಲ್ಲೇ ಹತ್ತಿರದಲ್ಲಿರುವ ವಿಷ್ಣು ಕಲಾಲ್‌ ನಡೆಸುತ್ತಿರುವ ಮೈಲಾರ ವೈನ್‌ ಸೆಂಟರ್‌ನ ಬೀಗ ಮುರಿದು ಒಳ ನುಗ್ಗಿದ ಕಳ್ಳರು, ಸುಮಾರು 35 ಸಾವಿರ ನಗದನ್ನು ಹಾಗೂ ವಿವಿಧ ಮದ್ಯದ ಬಾಟಲಿಗಳನ್ನು ಕಳವುಗೈದಿದ್ದಾರೆ. ಮೈಲಾರ ವೈನ್ ಸೆಂಟರಿನ ಎದುರಿನಲ್ಲಿರುವ ಕಿರಣ್ ಕರಡಿ ಅವರ ಎಲ್ ಜಿ ಕಿರಾಣಿ ಅಂಗಡಿಯ ಮೇಲ್ಪಾವಣಿ ಶೀಟ್ ಒಡೆದು ಎರಡು ಸಾವಿರ ರೂ ನಗದನ್ನು ಕದ್ದಿದ್ದಾರೆ. ಮೈಲಾರ ವೈನ್ ಸೆಂಟರಿಗೆ ನುಗ್ಗಿ ಕಳವು ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಸುಕಿನ ಜಾವ ಸುಮಾರು ಎರಡುವರೆ ಗಂಟೆಯಿಂದ ನಾಲ್ಕು ಗಂಟೆಯ ಒಳಗಡೆ ಈ ಕಳ್ಳತನ ಕೃತ್ಯ ನಡೆದಿದೆ ಎನ್ನಲಾಗಿದೆ.

ಬೆಳಿಗ್ಗೆ ಆಯಾ ಅಂಗಡಿ ಮಾಲೀಕರು ಬಂದಾಗಲೇ ಕಳ್ಳತನ ಆಗಿದ್ದು ಗೊತ್ತಾಗಿದೆ. ತಕ್ಷಣ ಕಳ್ಳತನದ ಬಗ್ಗೆ ದಾಂಡೇಲಿ ನಗರ ಠಾಣೆಯ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದೆ. ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನ ನಡೆಸಿದ್ದಾರೆ.