ಮಾನಾಯಿ ಗೌಳಿವಾಡದಲ್ಲ್ಲಿ ಹದಗೆಟ್ಟ ರಸ್ತೆ : ಜನರ ಓಡಾಟಕ್ಕೆ ಹಾಗೂ ವಾಹನ ಸಂಚಾರಕ್ಕೆ ಸಂಕಷ್ಟ : ದುರಸ್ತಿಗೆ ಸ್ಥಳೀಯರಿಂದ ದಾಂಡೇಲಿಯಲ್ಲಿ ಮನವಿ.

ದಾಂಡೇಲಿ : ಜೋಯಿಡಾ ತಾಲ್ಲೂಕಿನ ಪ್ರಧಾನಿ ಗ್ರಾಮ ಪಂಚಾಯ್ತು ವ್ಯಾಪ್ತಿಯಲ್ಲಿ ಬರುವ ವಿರ್ನೋಲಿ ಗ್ರಾಮದ ಮಾನಾಯಿ ಗೌಳಿವಾಡಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆ ತೀವ್ರ ಹದಗೆಟ್ಟು, ಸ್ಥಳೀಯ ಜನರ ಓಡಾಟ ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಇದೇ ಊರಿನಲ್ಲಿ ಅಂಗನವಾಡಿ ಕೇಂದ್ರ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದಿದ್ದು, ವಿದ್ಯಾರ್ಥಿಗಳು ಎದ್ದು ಬಿದ್ದು ಶಾಲೆಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಾನಾಯಿ ಗೌಳಿವಾಡಕ್ಕೆ ಹೋಗುವ ರಸ್ತೆಯಲ್ಲಿ ಒಂದುವರೆ ಕಿ.ಮೀ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದ್ದು, ಅಪಾಯವನ್ನು ಅಹ್ವಾನಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯ ದುರಸ್ತಿಗೆ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ಅವ್ಯವಸ್ಥೆಯಿಂದ ಸಮರ್ಪಕ ಸಂಪರ್ಕವೆ ಇಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಅತೀ ತುರ್ತಾಗಿ ರಸ್ತೆ ದುರಸ್ತಿಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಇಂದು ನಗರದಲ್ಲ್ಲಿ ಸ್ಥಳೀಯರು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.