ಶೌಚಾಲಯದಲ್ಲಿ ವಿಡಿಯೋ ಮಾಡಿದ ವಿದ್ಯಾರ್ಥಿನಿಯೊಬ್ಬಳ ತಂದೆ ಪಿಎಫ್​ಐ ಕಾರ್ಯಕರ್ತ: ಸುನಿಲ್ ಕೆಆರ್

ಉಡುಪಿ,  ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣದ ಮೂವರು ಆರೋಪಿಗಳಲ್ಲಿ ಶಫಾಳ ತಂದೆ ನಿಷೇಧಿತ ಪಿಎಫ್​ಐ ಕಾರ್ಯಕರ್ತರ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್. ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಕಾಣಿಸುತ್ತಿದೆ ಎಂದರು.ವೀಡಿಯೋ ಮಾಡಿ ಮುಸಲ್ಮಾನರಿಗೆ ಕಳುಹಿಸಿ ಹೆದರಿಸಲಾಗುತ್ತಿದೆ. ಬ್ಲ್ಯಾಕ್ ಮೇಲ್ ಜಿಹಾದ್ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು. ಪಿಎಫ್​ಐ ಪ್ರಾಯೋಜಿತ ಷಡ್ಯಂತ್ರ ಇದರ ಹಿಂದೆ ಇದೆ ಎಂದು ಆರೋಪಿಸಿದ ಸುನಿಲ್ ಅವರು, ಪ್ರಕರಣದ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸಿದರು.

“ಪ್ರಕರಣದಲ್ಲಿ ದೊಡ್ಡ ಪಿತೂರಿ ಇದೆ. ಭಾಗಿಯಾಗಿರುವ ಮೂವರು ಬಾಲಕಿಯರಲ್ಲಿ ಒಬ್ಬಳ ತಂದೆ ನಿಷೇಧಿತ ಸಂಘಟನೆಯಾದ ಪಿಎಫ್‌ಐನ ಕಾರ್ಯಕರ್ತ. ಮತ್ತೊಬ್ಬ ವಿದ್ಯಾರ್ಥಿನಿ ಹಸುವಿನ ಮಾಂಸ ಮಾರಾಟ ಮಾಡುತ್ತಿದ್ದ ಹೋಟೆಲ್ ಮಾಲೀಕನ ಮಗಳು. ಈ ಮೂವರು ವಿದ್ಯಾರ್ಥಿಗಳು ಜಿಹಾದ್ ಮಾಡುತ್ತಿದ್ದ ಕುಟುಂಬದಿಂದ ಬಂದವರು. ಆರು ತಿಂಗಳಿಂದ ಇಂತಹ ವಿಡಿಯೋ ರೆಕಾರ್ಡಿಂಗ್ ನಡೆಯುತ್ತಿತ್ತು ಎಂದು ಕಾಲೇಜಿನ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ” ಎಂದು ಸುನಿಲ್ ಹೇಳಿದರು.

ವಿಶ್ವ ಹಿಂದೂ ಪರಿಷತ್ ಮುಖಂಡರಾದ ಶರಣ್ ಪಂಪ್‌ವೆಲ್ ಮತ್ತು ದಿನೇಶ್ ಮೆಂಡನ್ ಅವರ ದ್ವೇಷದ ಭಾಷಣದ ಆರೋಪದ ಮೇಲೆ ಉಡುಪಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಅನ್ನು ಭಜರಂಗದಳದ ಮುಖಂಡರು ಖಂಡಿಸಿದ್ದಾರೆ.

ಜುಲೈ 28 ರಂದು ನಡೆದ ರ್ಯಾಲಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ವೀಣಾ ಶೆಟ್ಟಿ ವಿರುದ್ಧ ಉಡುಪಿ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ. ಉಡುಪಿ ಕಾಲೇಜು ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಮೂವರು ವಿದ್ಯಾರ್ಥಿಗಳು ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ.