ಬೆಂಗಳೂರು ಟು ಕಾಶಿಗೆ ಹೊರಟ ನಾಲ್ಕನೇ ರೈಲಿಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹಸಿರು ನಿಶಾನೆ

ಬೆಂಗಳೂರು, ಜುಲೈ 29: ಕರ್ನಾಟಕದಿಂದ ತೆರಳುವ ಕಾಶಿ ಯಾತ್ರಿಗಳ  ಅನುಕೂಲಕ್ಕಾಗಿ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯು ವಿಶೇಷ ರೈಲು ವ್ಯವಸ್ಥೆ ಕಲ್ಪಿಸಿದೆ. ಅದರಂತೆ ಇಂದು (ಜುಲೈ 29) ಕಾಶಿಗೆ ಹೊರಟ ನಾಲ್ಕನೇ ಕರ್ನಾಟಕ ಭಾರತ್ ಗೌರವ್ ಕಾಶಿ ಯಾತ್ರೆ ರೈಲಿಗೆ ಬೆಂಗಳೂರು ನಗರದ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಮುಜರಾಯಿ ಇಲಾಖೆ Ramalinga Reddy ಹಸಿರು ನಿಶಾನೆ ತೋರಿದರು.

ಕರ್ನಾಟಕ ಭಾರತ್ ಗೌರವ್ ಕಾಶಿ ಯಾತ್ರೆ ರೈಲಿನ ಟಿಕೆಟ್ ದರ 20,000 ರೂ. ಆಗಿದೆ. ಆದರೆ ಈ ರೈಲುಗಳಲ್ಲಿ ಪ್ರಯಾಣಿಸುವ ಜನರಿಗೆ ಸರಕಾರವು 5,000 ರೂ. ಸಬ್ಸಿಡಿ ನೀಡುತ್ತಿದೆ. ಪ್ರವಾಸಕ್ಕೆ 15,000 ರೂ., ಸರ್ಕಾರದಿಂದ 5,000 ರೂ.ಗಳ ಸಬ್ಸಿಡಿ ನೀಡಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಕರ್ನಾಟಕ ಭಾರತ್ ಗೌರವ್ ಕಾಶಿ ಯಾತ್ರಾ ರೈಲಿನಲ್ಲಿ ಕಾಶಿ ಯಾತ್ರೆಗೆ ಜನರು 15,000 ರೂ.ಗಳನ್ನು ಪಾವತಿಸಬೇಕಾಗುತ್ತದೆ. 700 ಆಸನಗಳ ಸಾಮರ್ಥ್ಯ ಹೊಂದಿರುವ ಈ ರೈಲು ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಟು ಎರಡು ದಿನಗಳಲ್ಲಿ ಕಾಶಿಯನ್ನು ತಲುಪುಲಿದೆ. ನಂತರ ವಾರಣಾಸಿಯಿಂದ ಅಯೋಧ್ಯೆಗೆ ತೆರಳಿ, ಅಲ್ಲಿಂದ ಪ್ರಯಾಗ್ ರಾಜ್​​ಗೆ ಹೋಗಿ ಬೆಂಗಳೂರಿಗೆ ವಾಪಸ್ ಆಗಲಿದೆ. ವಿಶೇಷ ರೈಲುಗಳಲ್ಲಿ ಪ್ರಯಾಣಿಸುವ ಜನರಿಗೆ ಆಹಾರ ಮತ್ತು ವಸತಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಕರ್ನಾಟಕ ಭಾರತ್ ಗೌರವ್ ಕಾಶಿ ಯಾತ್ರೆ ರೈಲು ರಾಯಚೂರು, ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ಬೀರೂರು, ದಾವಣಗೆರೆ, ಮತ್ತು ಯಶವಂತಪುರದಲ್ಲಿ ನಿಲುಗಡೆ ಹೊಂದಿದೆ. ಇಂದು ನಾಲ್ಕನೇ ವಿಶೇಷ ರೈಲು ಸೇವೆ ಆರಂಭಿಸಿದ್ದು, ಐದನೇ ರೈಲು ಆಗಸ್ಟ್ 15 ರಂದು ಹೊರಡಲಿದೆ. ಈ ವಿಶೇಷ ರೈಲಿನಲ್ಲಿ ಕಾಶಿಗೆ ಭೇಟಿ ನೀಡಲು ಬಯಸುವ ಜನರು ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ.