ಸ್ಮಶಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಸಾಮಾನ್ಯವಾಗಿ ಮದುವೆಗಳು ಕಲ್ಯಾಣ ಮಂಟಪದಲ್ಲಿ ಅಥವಾ ಮನೆ ಆವರಣದಲ್ಲಿ ಇಲ್ಲದಿದ್ದರೆ ದೇವಸ್ಥಾನದಲ್ಲಿ ನಡೆಯುತ್ತವೆ. ಬಹಳ ಶ್ರೀಮಂತರಾಗಿದ್ದರೆ ಪ್ಯಾಲೇಸ್, ಬೀಚ್‌ಗಳಲ್ಲೂ ಮದುವೆ ನಡೆಸುತ್ತಾರೆ. ಇತ್ತೀಚಿಗೆ ಡೆಸ್ಟಿನೇಶನ್‌ ವೆಡ್ಡಿಂಗ್ ಎಂದು ರೆಸಾರ್ಟ್‌, ಬೋಟ್‌, ಸಮುದ್ರದಲ್ಲೂ ಮದ್ವೆ ಮಾಡ್ಕೊಳ್ತಾರೆ.. ವಿಮಾನದಲ್ಲೂ ಕೆಲವು ಮದುವೆಗಳು ನಡೆದಿವೆ. ಆದರೆ ಮಹಾರಾಷ್ಟ್ರದಲ್ಲಿ ಇದೆಲ್ಲವನ್ನೂ ಬಿಟ್ಟು ವಿಚಿತ್ರ ರೀತಿಯಲ್ಲಿ ಮದುವೆ ನಡೆದಿದೆ. ಇಲ್ಲಿ ಜೋಡಿ ಸ್ಮಶಾನದಲ್ಲಿ ಹೊಸ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ನಂಬೋಕೆ ಕಷ್ಟವಾದರೂ ಇದು ನಿಜ. ಮಹಾರಾಷ್ಟದಲ್ಲಿ ಸ್ಮಶಾನದಲ್ಲಿ ಮದುವೆಯೊಂದು ನಡೆದಿದೆ. ಮೇಲಾಗಿ ಇದೊಂದು ಪ್ರೇಮ ವಿವಾಹ ಎಂಬುದು ಗಮನಾರ್ಹ.

ಅಹಮದ್‌ನಗರ ಜಿಲ್ಲೆಯ ರಹತಾ ಪಟ್ಟಣದ ಗಂಗಾಧರ ಗಾಯಕವಾಡ ದಂಪತಿ ಹಲವು ವರ್ಷಗಳಿಂದ ಸ್ಮಶಾನದಲ್ಲಿ ಕೆಲಸ ಮಾಡುತ್ತ ಜೀವನ ನಡೆಸುತ್ತಿದ್ದಾರೆ. ಇತರರಿಗೆ ಅಶುಭವಾಗಿರುವ ಸ್ಮಶಾನವೇ ಇವರ ಪಾಲಿಗೆ ಜೀವನಾಧಾರವಾಗಿ ಪರಿಣಮಿಸಿದೆ. ಇಲ್ಲಿಯೇ ಇದ್ದು ಈಕೆಯ ಮಗಳು ಮಯೂರಿ ವಿದ್ಯಾಭ್ಯಾಸ ಮುಗಿಸಿದ್ದಾಳೆ. ತನ್ನ 12 ನೇ ತರಗತಿಯ ನಂತರ ಅವಳು ಉದ್ಯೋಗಕ್ಕಾಗಿ ಶಿರಡಿಗೆ ತೆರಳಿದಳು. ಆಕೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಶಿರಸಿಯ ಯುವಕ ಮನೋಜ್ ಕೂಡ ಕೆಲಸ ಮಾಡುತ್ತಿದ್ದ. ಇಬ್ಬರ ಪರಿಚಯ ಸ್ನೇಹವಾಗಿ ಪ್ರೀತಿಗೆ ತಿರುಗಿತು. ನಂತರ ಇಬ್ಬರೂ ಮದುವೆಯಾಗಲು ಎರಡೂ ಕುಟುಂಬದ ಹಿರಿಯರಿಗೆ ತಿಳಿಸಿದ್ದಾರೆ. ಇಬ್ಬರ ಪ್ರೀತಿಗೆ ಹಿರಿಯರೂ ಒಪ್ಪಿಗೆ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಗಾಯಕ್ವಾಡ್ ದಂಪತಿ ತಮ್ಮ ಮಗಳ ಮದುವೆಯನ್ನು ಜೀವನದಲ್ಲಿ ತಮಗೆ ಎಲ್ಲವನ್ನೂ ಕೊಟ್ಟ ಸ್ಮಶಾನದಲ್ಲಿ ಮಾಡಬೇಕೆಂಬ ಆಸೆಯಿತ್ತು. ಈ ಬಗ್ಗೆ ಹುಡುಗನ ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ. ಅವರು ಸಹ ಖುಷಿಯಿಂದ ಸ್ಮಶಾನದಲ್ಲಿ ಮದುವೆ ನಡೆಸುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಸ್ಮಶಾನದಲ್ಲಿ ಮದುವೆಯ ಸ್ಥಳಕ್ಕೆ ವ್ಯವಸ್ಥೆ ಮಾಡಲಾಯಿತು. ಅಲ್ಲಿ ಮನೋಜ್ ಮತ್ತು ಮಯೂರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸ್ಮಶಾನದಲ್ಲಿ ಪೋಷಕರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಜೋಡಿಯಾದರು.

ಗ್ರಾಮದ ನಾಗರಿಕರು ಮಯೂರಿ ಮತ್ತು ಮನೋಜ್ ಅವರ ಮದುವೆಗೆ ಬೇಕಾದ ಪಾತ್ರೆಗಳನ್ನು ಸಂಗ್ರಹಿಸಿದರು. ಮಾಜಿ ಮೇಯರ್‌ಗಳಾದ ಮಮತಾ ಪಿಪಾಡಾ ಮತ್ತು ರಾಜೇಂದ್ರ ಪಿಪಾಡಾ ಅವರು  ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡು ಈ ವಿಶಿಷ್ಟ ವಿವಾಹದಲ್ಲಿ ಪಾಲ್ಗೊಂಡರು. ಮೂಢನಂಬಿಕೆಯನ್ನು ಮುರಿಯುವ ಈ ಕ್ರಮವನ್ನು ಸ್ವಾಗತಿಸಲಾಯಿತು. ಸಾಮಾಜಿಕ ಕಾರ್ಯಕರ್ತ ದಶರತ್ ತೂಪೆ ಕೂಡ ತಮ್ಮ ಕಂಠದಲ್ಲಿ ಮಂಗಳಾಷ್ಟಕ ಹೇಳುವ ಮೂಲಕ ನವದಂಪತಿಗಳಿಗೆ ಶುಭ ಹಾರೈಸಿದರು. 

ಸ್ಮಶಾನವನ್ನು ಜೀವನದ ಕೊನೆಯ ಯಾತ್ರೆಗೆ ಸಮೀಕರಿಸಲಾಗಿದೆ, ಆದರೆ ಗಾಯಕ್ವಾಡ್ ದಂಪತಿಗಳು ತಮ್ಮ ಮಗಳ ಹೊಸ ಪ್ರಯಾಣವನ್ನು ಇಲ್ಲಿಂದ ಪ್ರಾರಂಭಿಸಿ ಸಮಾಜಕ್ಕೆ ಮೂಢನಂಬಿಕೆ ತೊಡೆದುಹಾಕಲು ಸಂದೇಶವನ್ನು ನೀಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಈ ಮದುವೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.