ಆರೋಗ್ಯವಂತ ಮಕ್ಕಳು ದೇಶದ ಆಸ್ತಿ: ಸ್ಪೀಕರ್ ಕಾಗೇರಿ

ಶಿರಸಿ: ಮಕ್ಕಳಲ್ಲಿ ಅಪೌಷ್ಟಿಕತೆ ಕಡಿಮೆಗೊಳಿಸಿ ಸದೃಢತೆ ಹೆಚ್ಚಿಸಲು ಪೋಷಣ ಶಕ್ತಿ ಅಭಿಯಾನ ನೆರವಾಗುತ್ತದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಅವರು ನಗರದ ನಂ 2 ಶಾಸಕರ ಮಾದರಿ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟದ ಜೊತೆಗೆ ಪೌಷ್ಠಿಕ ಆಹಾರ ವಿತರಿಸುವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ಮಕ್ಕಳಲ್ಲಿ ಪೌಷ್ಟಿಕ ಅಂಶ ಕಡಿಮೆ ಇರುವಲ್ಲಿ ಪ್ರಧಾನ ಮಂತ್ರಿ ಪೋಷಣ ಶಕ್ತಿ ಅಭಿಯಾನದ ಅಡಿ ವಿತರಿಸಲಾಗುತ್ತದೆ. ಮಕ್ಕಳು ಪೌಷ್ಟಿಕ ಆಹಾರ ಸೇವನೆ ಜೊತೆಗೆ ವ್ಯಾಯಾಮವನ್ನು ಕೂಡ ನಿಯಮಿತವಾಗಿ ಮಾಡಬೇಕು. ಆರೋಗ್ಯವಂತ ಮಕ್ಕಳು ನಾಡಿನ ಆಸ್ತಿ. ಅಪೌಷ್ಟಿಕತೆ ನಿರ್ಮೂಲನೆಗೆ ಸರ್ಕಾರ ಕೊಡುವ ಹಣ್ಣು, ಶೇಂಗಾ ಚಿಕ್ಕಿ, ಮೊಟ್ಟೆ ಬಳಸಬೇಕು ಎಂದರು.

ಡಿಡಿಪಿಐ ಬಸವರಾಜು, ಬಿಇಓ ಎಂ.ಎಸ್.ಹೆಗಡೆ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ ಸೇರಿದಂತೆ ಇತರರು ಉಪಸ್ಥಿತರಿದ್ದರು.