ಟಿಕೆಟ್ ನೀಡಲು ಸೀಟ್​ ಮೇಲೆ ಹತ್ತಿ ಕೂತ ಕಂಡಕ್ಟರ್, ಶಕ್ತಿ ಯೋಜನೆಯಿಂದ ಭಾರೀ ಫಜೀತಿ

ರಾಯಚೂರು: ಶಕ್ತಿ ಯೋಜನೆ ಹೆಸರಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ ಭಾಗ್ಯ ಸಿಕ್ಕಿದೆ . ಹೀಗಾಗಿ ಎಲ್ಲಾ ಸರ್ಕಾರಿ ಬಸ್​ಗಳು ಮಹಿಳೆಯರಿಂದ ತುಂಬಿ ತುಳುಕುತ್ತಿವೆ. ಸರ್ಕಾರದ ಶಕ್ತಿ ಯೋಜನೆ ಎಫೆಕ್ಟ್​ನಿಂದಾಗಿ ರಾಯಚೂರಿನ ಗ್ರಾಮೀಣ ಭಾಗದ ಬಸ್​ಗಳಲ್ಲಿ ಕಂಡಕ್ಟರ್​ಗಳು ಪರದಾಡುವಂತಾಗಿದೆ. ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್ ಪ್ರಯಾಣಿಕರಿಗೆ ಟಿಕೆಟ್ ನೀಡಲು ಹರಸಾಹಸ ಪಡುತ್ತಿರುವುದು ಕಂಡು ಬಂದಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಮುದಗಲ್-ಅಂಕಲಿಮಠ-ಮುದೇನೂರು ಮಾರ್ಗದಲ್ಲಿ ಬಸ್ ಫುಲ್ ರಶ್‌ ಆಗಿದೆ. ಈ ಹಿನ್ನೆಲೆ ಟಿಕೆಟ್ ಕೊಡಲಾಗದೇ ಬಸ್ ಕಂಡಕ್ಟರ್ ಪರದಾಡಿದ್ದಾರೆ. ಪ್ರಯಾಣಿಕರಿಗೆ ಟಿಕೆಟ್ ನೀಡಲು ಸ್ಥಳವಿಲ್ಲದೇ ಕೊನೆಗೆ ಸೀಟ್ ಮೇಲಿನ ರಾಡ್ ಮೇಲೆ ಕುಳಿತು ಟಿಕೆಟ್ ನೀಡಿದ್ದಾರೆ. ಸದ್ಯ ಕಂಡಕ್ಟರ್​ನ ಪಜೀತಿಯ ವಿಡಿಯೋ ವೈರಲ್ ಆಗಿದೆ.

ಮುದಗಲ್-ಮುದೇನೂರು ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕರ್ನಾಟಕದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಶಕ್ತಿ ಯೋಜನೆ ಜಾರಿಯಾದ ಒಂದು ತಿಂಗಳಲ್ಲಿ 16 ಕೋಟಿಗೂ ಹೆಚ್ಚು ಮಹಿಳಾ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ.

ಜುಲೈ 4 ರಂದು 70 ಲಕ್ಷ ಮಹಿಳಾ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ್ದು ಇದು ಒಂದೇ ದಿನದಲ್ಲಿ ಅತಿ ಹೆಚ್ಚು ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ.