ಡ್ಯಾಂ ಬಳಿ ವಿದ್ಯುತ್ ಅವಘಡ – 16 ಮಂದಿ ದಾರುಣ ಸಾವು

ಡೆಹ್ರಾಡೂನ್: ವಿದ್ಯುತ್ ಅವಘಡದಿಂದ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಮತ್ತು ಐವರು ಗೃಹ ರಕ್ಷಕರು ಸೇರಿದಂತೆ ಕನಿಷ್ಠ 16 ಜನ ಸಾವನ್ನಪ್ಪಿದ ಘಟನೆ ಉತ್ತರಾಖಂಡದ ಚಮೋಲಿಯಲ್ಲಿ ಬುಧವಾರ ನಡೆದಿದೆ.

ಅಲ್ಕಾನಂದ ನದಿಯ ದಡದ ನಮಾಮಿ ಗಂಗೆ ಯೋಜನೆಯ ಸ್ಥಳದಲ್ಲಿ ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡಿದ್ದು, ಈ ಅವಘಡಕ್ಕೆ ಕಾರಣವಾಗಿದೆ. ಸ್ಥಳದಲ್ಲಿ ಹಲವಾರು ಜನ ಸಿಲುಕಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನದಿ ಅಣೆಕಟ್ಟಿನ ಮೇಲೆ ವಿದ್ಯುತ್ ತಂತಿ ಹಾದು ಹೋಗಿತ್ತು. ಇದನ್ನು ಸ್ಪರ್ಶಿಸಿ ಬಹುತೇಕರು ಮೃತಪಟ್ಟಿದ್ದಾರೆ. ಯೋಜನೆಯ ಉಸ್ತುವಾರಿ ಗಣೇಶ್ ಲಾಲ್ ಮೊದಲು ಸಾವನ್ನಪ್ಪಿದರು. ಬಳಿಕ ಉಳಿದವರು ಇದನ್ನು ಸ್ಪರ್ಶಿಸಿದ್ದಾರೆ. ಇದು ಟ್ರಾನ್ಸ್‌ಫಾರ್ಮರ್ ಸ್ಫೋಟಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ 7 ಜನ ಗಾಯಗೊಂಡಿದ್ದು, ಅವರನ್ನು ಹೆಲಿಕಾಪ್ಟರ್ ಮೂಲಕ ರಿಷಿಕೇಶದ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.