​ಬೆಂಗಳೂರಿನ ಪ್ರತಿಷ್ಠಿತ ಮಠದ ಅರ್ಚಕನ ಜತೆ ಪರಿಚಯ; 1 ಕೋಟಿ ರೂ. ಅಧಿಕ ಹಣ ಪಡೆದು ವಂಚನೆ, ಆರೋಪಿ ಅರೆಸ್ಟ್

ಬೆಂಗಳೂರು, ಜು.20: ಇತ್ತೀಚೆಗೆ ಬೆಂಗಳೂರಿನಲ್ಲಿ ಕಳ್ಳತನ, ಕೊಲೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಆರೋಪಿಗಳಿಗೆ ಪೊಲೀಸರ ಭಯವಿಲ್ಲದಂತೆ ಕಾಣುತ್ತಿದೆ. ದಿನವೂ ಮಹಾನಗರದಲ್ಲಿ ಒಂದಿಲ್ಲೊಂದು ಪ್ರದೇಶಗಳಲ್ಲಿ ಅಪರಾಧಗಳು ಬೆಳಕಿಗೆ ಬರುತ್ತಿದ್ದು, ಈಗಿನ ಕಾಲದಲ್ಲಿ ಯಾರನ್ನ ನಂಬುವುದು ಗೊತ್ತಾಗದಂತ ಪರಿಸ್ಥಿತಿ ಎದುರಾಗಿದೆ. ಹೌದು ಅಪರಿಚಿತ ವ್ಯಕ್ತಿಗಳನ್ನು ನಂಬುವ ಮುಂಚೆ ಎಚ್ಚರವಾಗಿರುವುದು ಒಳ್ಳೆಯದು. ಮನೆ ಮಗನಂತೆ ಬಂದು, ತಮಗೆ ಗೊತ್ತಾಗದ ಹಾಗೆ ಮನೆಯಲ್ಲಿದ್ದ ಹಣ, ಆಸ್ತಿ ವಂಚನೆ ಮಾಡಿ ಹೋಗುತ್ತಾರೆ. ಅದರಂತೆ ಬೆಂಗಳೂರಿನ ಪ್ರತಿಷ್ಠಿತ ಮಠದ ಅರ್ಚಕನಿಗೆ ಕೋಟಿ ಹಣ ಪಡೆದು ವಂಚನೆ ಮಾಡಿದ್ದ ಆರೋಪಿಯನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ.

ಮಠದ ಸಹಾಯಕನಂತೆ ಬಂದು 1 ಕೋಟಿ 7ಲಕ್ಷ ಹಣ ವಂಚನೆ

ಚೆನ್ನೈ ಮೂಲದವನಾದ ಆರೋಪಿ ಶೇಷಗಿರಿ (45), ತಮಿಳುನಾಡಿನಲ್ಲಿ ಬಿಕಾಂ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಬ್ಯಾಂಕಿಂಗ್​ನಲ್ಲೂ ಕೆಲಸ ಮಾಡಿ ಶೇರು ಮಾರುಕಟ್ಟೆ ಬಗ್ಗೆ ತಿಳಿದುಕೊಂಡಿದ್ದ ಇತ. 2021ರಲ್ಲಿ ಬೆಂಗಳೂರಿಗೆ ಬಂದು, ಪ್ರತಿಷ್ಠಿತ ಮಠದಲ್ಲಿ ರಾಘವೇಂದ್ರ ಅರ್ಚಕರು ಎಂಬುವವರು ಪರಿಚಯವಾಗಿದ್ದರು. ಹೀಗೆ ದಿನದೂಡುತ್ತಾ ಆರೋಪಿ ಶೇಷಗಿರಿ ಅರ್ಚಕರ ಆತ್ಮೀಯತೆ ಗಳಿಸಿ, ಸ್ವಂತ ಮಗನಂತಾಗಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಆತ, ಜಾಗ ಖರೀದಿಸಲು ಹಣ ಡಬಲ್ ಮಾಡಿ ಕೊಡೊದಾಗಿ ಹೇಳಿ ವಿವಿಧ ಹಂತಗಳಲ್ಲಿ ಅರ್ಚಕರ ಬಳಿ ಹಣ ಪಡೆದು ಬರೊಬ್ಬರಿ 1 ಕೋಟಿ 7 ಲಕ್ಷ ವಂಚನೆ ಮಾಡಿದ್ದ ಆರೋಪ ಮಾಡಿದ್ದರು.

ಬಂಧಿತನಿಂದ 45 ಲಕ್ಷ ಹಣ ಹಾಗೂ ಜಾಗದ ದಾಖಲೆ ವಶಕ್ಕೆ

ಇನ್ನು ಅರ್ಚಕನಿಂದ ಹಣ ಪಡೆದು ಶೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಬಳಿಕ ಮುಳುಗಿಹೊಯ್ತೆಂದು ಹಣ ವಾಪಾಸ್ ಮಾಡದೇ ಪರಾರಿಯಾಗಿದ್ದ. ಈ ಬಗ್ಗೆ ಬನಶಂಕರಿ ಠಾಣೆಯಲ್ಲಿ ಅರ್ಚಕರು ದೂರು ನೀಡಿದ್ದರು. ಇದರನ್ವಯ ತನಿಖೆ ಆರಂಭಿಸಿದ ಪೊಲೀಸರಿಗೆ ಆರೋಪಿಯ ಮತ್ತೊಂದು ಕೃತ್ಯ ಬಯಲಾಗಿತ್ತು. ಶೇಷಗಿರಿ, ಅರ್ಚಕರಿಗೆ ತಿಳಿಯದಂತೆ ಸ್ವಂತ ಪ್ರಾಪರ್ಟಿ ಸಹ ಸೇಲ್ ಡೀಡ್ ಮಾಡಿಕೊಂಡಿದ್ದ. ಈ ಬಗ್ಗೆ ಪೊಲೀಸರು ಪತ್ತೆ ಹಚ್ಚಿ, ಬಳಿಕ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡರು. ನಂತರ ತಮಿಳುನಾಡಿನಲ್ಲಿದ್ದ ಆರೋಪಿಯನ್ನು ಬಂಧಿಸಿ ಕರೆತಂದ ಪೊಲೀಸರು, ಬಂಧಿತನಿಂದ 45 ಲಕ್ಷ ಹಣ ಹಾಗೂ ಜಾಗದ ದಾಖಲೆಯನ್ನ ವಶಕ್ಕೆ ಪಡೆದಿದ್ದಾರೆ.