ಹೆಂಡತಿಯ ಅನೈತಿಕ ಸಂಬಂಧದಿಂದ ಮನನೊಂದ ಗಂಡ; ಸಾವಿನ ಆಡಿಯೋ ರೆಕಾರ್ಡ್​ ಮಾಡಿ ಆತ್ಮಹತ್ಯೆಗೆ ಶರಣು

ಚಿಕ್ಕಬಳ್ಳಾಪುರ, ಜು.19: ತಾಲೂಕಿನ ಗುವ್ವಲಕಾನಹಳ್ಳಿ ಗ್ರಾಮದ ನಿವಾಸಿ ಸುರೇಶ ಹಾಗೂ ತುಮಕೂರು ಜಿಲ್ಲೆಯ ಬುಕ್ಕಾ ಪಟ್ಟಣ ನಿವಾಸಿ ಹೇಮಾ ಎಂಬುವವರು 15 ವರ್ಷಗಳ ಹಿಂದೆ ಮದುವೆ ಮಾಡಿಕೊಂಡು ಸುಖ ಸಂಸಾರ ನಡೆಸಿದ್ರು. ದಂಪತಿಗೆ 14 ವರ್ಷ ಹಾಗೂ 9 ವರ್ಷದ ಇಬ್ಬರು ಗಂಡು ಮಕ್ಕಳು ಇದ್ದಾರೆ. ಹೇಮಾಳಿಗೆ ಸ್ವತಃ ಗಂಡನೆ ಅಂಗನವಾಡಿ ಶಾಲೆಯ ಶಿಕ್ಷಕಿ ಹುದ್ದೆಯನ್ನು ಕೊಡಿಸಿದ್ದನಂತೆ. ಸುಖ ಸಂಸಾರದ ಮದ್ಯೆ ಸ್ನೇಹಿತ ಹುನೇಗಲ್ ಗ್ರಾಮದ ನಿವಾಸಿ ಗಂಗಾಧರ್ ಎನ್ನುವಾತ ಆಗಾಗ ಮನೆಗೆ ಬಂದು ಹೊಗುತ್ತಿದ್ದ. ಕೊನೆಗೆ ಸ್ನೇಹಿತನ ಕಿತಾಪತಿಗೆ ಸುರೇಶ ಮನೆಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸುರೇಶ್​ನ ಪತ್ನಿ ಹೇಮಾ, ಅಂಗನವಾಡಿ ಶಿಕ್ಷಕಿಯಾಗಿ ಹುನೇಗಲ್ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದಳು. ಸುರೇಶ್​ ಸ್ನೇಹಿತ ಗಂಗಾಧರ್​ಗೆ ಆತನ ಪತ್ನಿ ಹೇಮಾ ಮೇಲೆ ಕಣ್ಣು ಹಾಕಿದ್ದಾನೆ. ಬಳಿಕ ಆತನ ಪತ್ನಿಯನ್ನು ಪ್ರೀತಿಸಿ, ಅನೈತಿಕ ಸಂಬಂಧ ಬೆಳೆಸಿದ್ದನಂತೆ. ಈ ವಿಚಾರ ಗೊತ್ತಾಗಿ ಎರಡು ಕುಟುಂಬಸ್ಥರು ಇಬ್ಬರಿಗೂ ಬೈಯ್ದು, ಬುದ್ದಿವಾದ ಹೇಳಿದ್ರೂ ತಿದ್ದಿಕೊಳ್ಳದೆ ವಿನಾಃಕಾರಣ ಸುರೇಶನ ಮೇಲೆ ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಪೊಲೀಸರಿಗೆ ದೂರು ನೀಡುವುದರ ಮೂಲಕ ಮಾನಸಿಕ ಕಿರುಕುಳ ನೀಡಿದ್ದಾರಂತೆ. ಇದರಿಂದ ಮನನೊಂದ ಸುರೇಶ. ತನ್ನ ಸಾವಿಗೆ ಪತ್ನಿ ಹೇಮಾ ಹಾಗೂ ಸ್ನೇಹಿತ ಗಂಗಾಧರ್ ಕಾರಣವೆಂದು ಆಡಿಯೊ ರೆಕಾರ್ಡ್ ಮಾಡಿ ಆತ್ಮಹತ್ಯೆಗೂ ಶರಣಾಗಿದ್ದಾನೆ.

ಸುರೇಶ ಸಾಯುವುದಕ್ಕೂ ಮುನ್ನ ಆಡಿಯೊ ರೆಕಾರ್ಡ ಮಾಡಿ ತನ್ನ ಸ್ನೇಹಿತರು ಬಂಧು ಬಳಗಕ್ಕೆ ಕಳುಹಿಸಿದ್ದು, ತನ್ನ ಸಾವಿಗೆ ಪತ್ನಿ ಹೇಮಾ ಹಾಗೂ ಗಂಗಾಧರ್ ಕಾರಣ, ತನ್ನ ಶವ ಸಂಸ್ಕಾರಕ್ಕೆ ತನ್ನ ಹೆಂಡತಿ ಹಾಗೂ ನನ್ನ ಮಕ್ಕಳು ಸಹ ಬರಬಾರದು. ಹಿಡಿ ಮಣ್ಣು ಸಹ ಹಾಕಬಾರದೆಂದು ಅವಲತ್ತುಕೊಂಡಿದ್ದಾನೆ. ಈ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಹೇಮಾ ಹಾಗೂ ಗಂಗಾಧರ್ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ಇಬ್ಬರನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.