ಚಿರತೆ ದಾಳಿಗೆ ಒಳಗಾಗಿದ್ದ ಬಾಲಕಿ ಚಿಕಿತ್ಸೆ ಫಲಿಸದೆ ಸಾವು

ಚಾಮರಾಜನಗರ: ಚಿರತೆ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಜೂನ್ 26ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದಲ್ಲಿ ಸುಶೀಲ (ಆರೂವರೆ ವರ್ಷ) ಎಂಬ ಬಾಲಕಿಯ ಮೇಲೆ ಏಕಾಏಕಿ ಚಿರತೆಯೊಂದು ದಾಳಿ ಮಾಡಿತ್ತು. ರಾತ್ರಿ ವೇಳೆ ಬಾಲಕಿ ಮನೆಯಿಂದ ಹೊರಗೆ ಬಂದಿದ್ದ ಸಂದರ್ಭ ಘಟನೆ ನಡೆದಿದ್ದು, ಚಿರತೆ ದಾಳಿಯಿಂದ ಬಾಲಕಿಯ ಕತ್ತಿನ ಬಳಿ ಗಂಭೀರ ಗಾಯಗಳಾಗಿತ್ತು. ಈ ಹಿನ್ನೆಲೆ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಗ್ಗಲಿಗುಂದಿ ಸೋಲಿಗರ ಹಾಡಿಯಲ್ಲಿ ಘಟನೆ ನಡೆದಿದ್ದು, ತೀವ್ರ ಗಾಯಗೊಂಡಿದ್ದ ಬಾಲಕಿಗೆ ಕಳೆದ 15ಕ್ಕೂ ಹೆಚ್ಚು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶುಕ್ರವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ.