ಬೆಂಗಳೂರಿನಲ್ಲಿ ಡೆಂಗ್ಯೂ ಏರಿಕೆ: ಕಳೆದ 11 ದಿನಗಳಲ್ಲಿ 178 ಪ್ರಕರಣಗಳು ಪತ್ತೆ

ಬೆಂಗಳೂರು: ಮುಂಗಾರು ಆರಂಭವಾಗುತ್ತಿದ್ದಂತೆ ನಗರದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಹೌದು ನಗರದಲ್ಲಿ ಡೆಂಗ್ಯೂ ಜ್ವರ ಹೆಚ್ಚಳವಾಗುತ್ತಿದ್ದು, ಕಳೆದ 11 ದಿನಗಳಲ್ಲಿ 178 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಈ ವರ್ಷ ಬಿಬಿಎಂಪಿ ವ್ಯಾಪ್ತಿಯಲ್ಲಿ 3565 ಡೆಂಗ್ಯೂ ಶಂಕಿತರ ಗುರುತು ಪತ್ತೆಯಾಗಿದೆ. ಈ ಪೈಕಿ 1009 ಜನರ ರಕ್ತದ ಮಾದರಿ ಪರೀಕ್ಷೆಗೆ ರವಾನೆ ಮಾಡಲಾಗಿದೆ. 1009 ಜನರ ಪೈಕಿ 905 ಜನರಿರಲ್ಲಿ ಡೆಂಗ್ಯೂ ಸೋಂಕು ದೃಢವಾಗಿದೆ. ಬೆಂಗಳೂರಿನಲ್ಲಿ ಈವರೆಗೆ 919 ಡೆಂಗಿ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಡೆಂಗ್ಯೂ ಜ್ವರದಿಂದ ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ. 2022ರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 585 ಡೆಂಗ್ಯೂ ಕೇಸ್ ಪತ್ತೆಯಾಗಿದ್ದವು.

ಡೆಂಗ್ಯೂ ಜ್ವರದ ಲಕ್ಷಣಗಳು

ಸೊಳ್ಳೆ ಕಚ್ಚಿದ ನಾಲ್ಕರಿಂದ ಹತ್ತು ದಿನಗಳ ಒಳಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ತಲೆನೋವು, ಮೈಕೈ ನೋವು ಅಥವಾ ಕೀಲು ನೋವು, ವಾಕರಿಕೆ, ಕಣ್ಣುಗಳ ಹಿಂಭಾಗದಲ್ಲಿ ನೋವು, ಊದಿಕೊಂಡಿರುವ ಗ್ರಂಥಿಗಳು, ಚರ್ಮದ ಭಾಗದಲ್ಲಿ ದದ್ದುಗಳು, ಜ್ವರ, ತಲೆನೋವು, ಸುಸ್ತು, ಶೀತ, ಗಂಟಲು ನೋವು, ವಾಂತಿ, ಹೊಟ್ಟೆನೋವು, ಮೈ ಕೈ ನೋವು, ಮೈಮೇಲೆ ಅಲರ್ಜಿ ರೀತಿಯಲ್ಲಿ ಗುಳ್ಳೆಗಳು ಏಳುವುದು.

ಡೆಂಗ್ಯೂ ಬಂದಾಗ ಪಪ್ಪಾಯಿ ಹಾಗೂ ಕಿವಿ ಹಣ್ಣನ್ನು ತಿನ್ನಬೇಕು. ಪಪ್ಪಾಯಿ ಎಲೆಯ ರಸ ಪ್ಲೇಟ್‌ಲೆಟ್‌ ಹೆಚ್ಚಿಸುತ್ತದೆ.

ಡೆಂಗ್ಯೂ ತಡೆಗಟ್ಟುವುದು ಹೇಗೆ?

ಡೆಂಗ್ಯೂ ತಡೆಗಟ್ಟಲು ಸೊಳ್ಳೆಗಳನ್ನು ನಿಯಂತ್ರಿಸಬೇಕು. ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರ ವಹಿಸಬೇಕು. ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ನೀರು ಶೇಖರಣಾ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಬೇಕು. ಪಾತ್ರೆ ಹಾಗೂ ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿಡಬೇಡಿ. ಮನೆಯ ಸುತ್ತ ಹಾಗೂ ತಾರಸಿಯ ಮೇಲೆ ನೀರು ನಿಲ್ಲದಂತೆ ಎಚ್ಚರ ವಹಿಸಿರಿ.

ತೆಂಗಿನ ಚಿಪ್ಪು, ಟಯರ್‌ನಂತಹ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ. ತೊಟ್ಟಿ, ಬಿಂದಿಗೆ, ಡ್ರಮ್‌ಗಳಲ್ಲಿ2-3 ದಿನಕ್ಕೊಮ್ಮೆ ನೀರು ಬದಲಿಸಿ ಸ್ವಚ್ಛಗೊಳಿಸಿ. ಸೊಳ್ಳೆಗಳನ್ನು ತಡೆಯಲು ಕಿಟಕಿ ಬಾಗಿಲುಗಳಿಗೆ ಮೆಶ್‌ ಹಾಕಿ ಅಥವಾ ಸೊಳ್ಳೆ ನಾಶಕ ಔಷಧಗಳನ್ನು ಬಳಸಿ. ಸೊಳ್ಳೆಗಳನ್ನು ನಿಯಂತ್ರಿಸಲು ಬೇವಿನ ಸೊಪ್ಪಿನ ಹೊಗೆ ಹಾಕುವುದು ಒಳಿತು.