ಹುಡುಗಿ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಸಂಜಯನಗರ ವ್ಯಾಪ್ತಿಯಲ್ಲಿ ಹುಡುಗಿ ವಿಚಾರಕ್ಕೆ ಯುವಕನ ಕೊಲೆಯಾಗಿದೆ. ವರುಣ್ ಕೊಲೆಯಾದವನು. ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ರೂಮ್ ಮೇಟ್‌ನಿಂದಲೇ ವರುಣ್‌ ಕೊಲೆಯಾಗಿದ್ದಾನೆ.

ವರುಣ್ ಹಾಗೂ ದಿವೇಶ್ ಇಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಮೇಲ್ನೋಟಕ್ಕೆ ಇದೇ ವಿಚಾರಕ್ಕೆ ಕೊಲೆಯಾಗಿರುವ ಮಾಹಿತಿ ಲಭ್ಯವಾಗಿದೆ. ಶನಿವಾರ ಇಬ್ಬರ ನಡುವೆ ಪ್ರೀತಿ ವಿಚಾರಕ್ಕೆ ಗಲಾಟೆ ಆಗಿದ್ದು, ಗಲಾಟೆ ವಿಕೋಪಕ್ಕೆ ತಿರುಗಿದೆ. ಸಿಟ್ಟಿನಲ್ಲಿ ದಿವೇಶ್‌ ವರುಣ್‌ಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

ಕೊಲೆಯಾದ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಕೊಲೆ ಮಾಡಿ ಸ್ಥಳದಲ್ಲೇ ಇದ್ದ ಕೊಲೆ ಆರೋಪಿ ದಿವೇಶ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಕೊಲೆಗೆ ಕಾರಣ ಹುಡುಗಿ ವಿಚಾರ ಎಂದು ತಿಳಿದು ಬಂದಿದೆ. ವರುಣ್ ಬಾಗಲೂರಿನಲ್ಲಿ ಸೇಫ್ಟಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಒಂದು ವರ್ಷದಿಂದ ಇವರಿಬ್ಬರು ಸಂಜಯ್ ನಗರದ ಗೆದ್ದಲಹಳ್ಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಒಟ್ಟಾರೆ ನಾಲ್ವರು ಗೆಳೆಯರು ಒಂದೇ ಮನೆಯಲ್ಲಿ ವಾಸವಿದ್ದರು. ಮೂವರು ಉಡುಪಿ ಮೂಲದವರು, ಇನ್ನೋರ್ವ ಬೆಂಗಳೂರಿನವನು. ವರುಣ್‌ ಹಾಗೂ ದಿವೇಶ್‌ ಇಬ್ಬರು ಸಹ ಒಂದೆ ಹುಡುಗಿಯ ಜತೆ ಡೇಟ್ ಮಾಡುತ್ತಿದ್ದರು. ಹುಡುಗಿ ವಿಚಾರಕ್ಕೆ ಜಗಳವಾಡಿ ಇಂದು ಬೆಳಗ್ಗೆ ಸುಮಾರು 8 ಗಂಟೆಗೆ ಕೊಲೆ ಮಾಡಿದ್ದಾನೆ. ಮರಣೋತ್ತರ ಪರೀಕ್ಷೆ ಬಳಿಕ ಇನ್ನಷ್ಟು ಮಾಹಿತಿ ತಿಳಿಯಲಿದೆ ಎಂದು ತಿಳಿಸಿದರು.