ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ ಈರುಳ್ಳಿ ತುಂಬಿದ್ದ ಟೆಂಪೋ ಪಲ್ಟಿ

ನೆಲಮಂಗಲ: ಹಿಂಬದಿಯಿಂದ ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ ಈರುಳ್ಳಿ ತುಂಬಿದ್ದ ಟೆಂಪೋ ಪಲ್ಟಿಯಾಗಿ ಓರ್ವ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದ ಅಂಚೆಪಾಳ್ಯದ ಬಳಿ ನಡೆದಿದೆ.

ತುಮಕೂರು ಮಾರ್ಗವಾಗಿ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ ಬರುತ್ತಿದ್ದ ಈರುಳ್ಳಿ ತುಂಬಿದ ಟೆಂಪೋಗೆ ಹಿಂಬದಿಯಿಂದ ವೇಗವಾಗಿ ಬಂದ ಮತ್ತೊಂದು ಕಂಟೇನರ್ ಲಾರಿ ಡಿಕ್ಕಿ ಹೊಡೆದಿದೆ. ಕಂಟೇನರ್ ಗುದ್ದಿದ ರಭಸಕ್ಕೆ ಟೆಂಪೋ ಪಲ್ಟಿಯಾಗಿದೆ. ಘಟನೆಯಲ್ಲಿ ಈರುಳ್ಳಿ ಟೆಂಪೋದಲ್ಲಿದ್ದ ಗಂಗಾಧರಪ್ಪ (55) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

ಮತ್ತೊಂದು ವಾಹನದ ಚಾಲಕ ಓಬಣ್ಣರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಟೆಂಪೋ ಪಲ್ಟಿಯಾಗಿದ್ದರಿಂದ ಕೆಲ ಜನರು ಈರುಳ್ಳಿ ತುಂಬಲು ಮುಗಿಬಿದ್ದ ಘಟನೆ ಕೂಡ ನಡೆದಿದೆ. ಸ್ಥಳಕ್ಕೆ ಬಂದ ನೆಲಮಂಗಲ ಸಂಚಾರಿ ಪೊಲೀಸರು ಎರಡೂ ವಾಹನಗಳನ್ನು ತೆರವು ಮಾಡಿದ್ದಾರೆ. ಈ ಅಪಘಾತದಿಂದ ಕೆಲಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ನಿಯಂತ್ರಿಸಿದ್ದಾರೆ.