ಆಧುನಿಕ ಶ್ರವಣಕುಮಾರ; ತಾಯಿ ಮತ್ತು ಗಂಗಾಜಲ ಹೊತ್ತೊಯ್ದ ಯುವಕ

ಶ್ರಾವಣ ಬಂತೆಂದರೆ ಎಲ್ಲೆಡೆ ಯಾತ್ರೆ ಜಾತ್ರೆಗಳ ಸಂಭ್ರಮ. ಹರಿದ್ವಾರದ ಕನ್ವರ್​ ಯಾತ್ರೆ ಜುಲೈ 15ರವರೆಗೆ ನಡೆಯಲಿದೆ. ಈ ವರ್ಷ ಸುಮಾರು 2 ಮಿಲಿಯನ್​ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂಬ ಅಂದಾಜಿದೆ. ಈಗಾಗಲೇ ಈ ಯಾತ್ರೆಯಲ್ಲಿ ಭಾಗಿಯಾಗಿರುವ ಅನೇಕ ಭಕ್ತರ ವಿಡಿಯೋಗಳು ವೈರಲ್ ಆಗುತ್ತಿವೆ. ಈ ಪೈಕಿ ಯುವಕನೊಬ್ಬ ತನ್ನ ತಾಯಿ ಮತ್ತು ಗಂಗಾಜಲವನ್ನು ಶ್ರವಣಕುಮಾರನಂತೆ ಹೆಗಲ ಮೇಲೆ ಹೊತ್ತು ನಡೆಯುತ್ತಿರುವ ವಿಡಿಯೋ ಗಮನ ಸೆಳೆದಿದೆ. ಟ್ವೀಟಿಗರು ತಮ್ಮ ತಮ್ಮ ಅಭಿಪ್ರಾಯಗಳನ್ನು ಎಂದಿನಂತೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ಅನ್ನು ಜು. 4ರಂದು ಎಎನ್​ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ. ಈತನಕ ಸುಮಾರು 62,000 ಜನರು ಈ ವಿಡಿಯೋ ನೋಡಿದ್ದಾರೆ. 2,300ಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ನೂರಾರು ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ತನ್ನ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಜನರು ಹರ್​ ಹರ್ ಮಹಾದೇವ, ಜೈ ಹೋ ಎಂದು ಜೈಕಾರ ಹೇಳಿದ್ದಾರೆ.

ಈ ಯಾತ್ರೆಯು ಉತ್ತರಾಖಂಡದ ಹರಿದ್ವಾರದಲ್ಲಿ ಶುರುವಾಗುತ್ತದೆ, ಗಂಗಾಜಲವನ್ನು ಸಂಗ್ರಹಿಸಿ ತಮ್ಮ ಊರಿನ ಶಿವದೇವಾಲಯಗಳಿಗೆ ಅರ್ಪಿಸುತ್ತಾರೆ. ಈ ಯಾತ್ರೆಗೆ ಬರುವವರು ಕಾಲ್ನಡಿಗೆಯಲ್ಲಿಯೇ ಸಾಗುತ್ತಾರೆ. ವಾಪಾಸು ತಮ್ಮ ಊರು, ರಾಜ್ಯಗಳಿಗೆ ಮರಳುವಾಗ ಗೌಮುಖ, ಗಂಗೋತ್ರಿ ಮತ್ತು ಬಿಹಾರದಲ್ಲಿರುವ ಸುಲ್ತಾನ್​ಗಂಜ್​ನಂಥ ಪ್ರಮುಖ ಸ್ಥಳಗಳನ್ನ ಇವರು ಸಂದರ್ಶಿಸುತ್ತಾರೆ.