ಕ್ಯಾನ್ಸರ್​ನಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯನ್ನು ಭೇಟಿಯಾಗಿ ಆಸೆ ಈಡೇರಿಸಿದ ಕಿಚ್ಚ ಸುದೀಪ್

ನಟ ಸುದೀಪ್​  ಅವರು ಸಿನಿಮಾದಲ್ಲಿ ಸಕ್ರಿಯವಾಗಿರುವುದು ಮಾತ್ರವಲ್ಲದೇ ಅನೇಕ ಸಮಾಜಮುಖಿ ಕಾರ್ಯಗಳನ್ನೂ ಮಾಡುತ್ತಾರೆ. ಅದಕ್ಕೆ ಈಗಾಗಲೇ ಅನೇಕ ಉದಾಹರಣೆಗಳು ಸಿಕ್ಕಿವೆ. ಈಗ ಮತ್ತೆ ಅಂಥದ್ದೇ ಘಟನೆ ನಡೆದಿದೆ. ಕ್ಯಾನ್ಸರ್​ನಿಂದ  ಬಳಲುತ್ತಿರುವ ಸಾಕ್ಷಿ ಎಂಬ ಬಾಲಕಿಯನ್ನು ಸುದೀಪ್ ಅವರು ಭೇಟಿ ಮಾಡಿದ್ದಾರೆ. ಆಕೆಯ ಆರೋಗ್ಯ ವಿಚಾರಿಸಿದ್ದಾರೆ. ಉಡುಗೊರೆ ಮತ್ತು ಆಟೋಗ್ರಾಫ್​ ನೀಡುವ ಮೂಲಕ ಆ ಪುಟ್ಟ ಅಭಿಮಾನಿಯ  ಮುಖದಲ್ಲಿ ನಗು ಮೂಡುವಂತೆ ಮಾಡಿದ್ದಾರೆ . ಕಿಚ್ಚ ಸುದೀಪ್ ಈ ಸಂದರ್ಭದ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಕಿಚ್ಚ ಸುದೀಪ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ತಮ್ಮ ನೆಚ್ಚಿನ ನಟನನ್ನು ಒಮ್ಮೆಯಾದರೂ ಭೇಟಿಯಾಗಬೇಕು ಎಂಬುದು ಎಲ್ಲ ಅಭಿಮಾನಿಗಳ ಆಸೆ. ಆದರೆ ಎಲ್ಲರಿಗೂ ಅಂಥ ಅವಕಾಶ ಸಿಗುವುದಿಲ್ಲ. ತಮ್ಮ ವಿಶೇಷ ಅಭಿಮಾನಿಗಳ ಬಗ್ಗೆ ಸುದೀಪ್​ ಅವರು ಯಾವಾಗಲೂ ಕಾಳಜಿ ವಹಿಸುತ್ತಾರೆ. ಬಾಲಕಿ ಸಾಕ್ಷಿ ಕೂಡ ಅಂಥ ಓರ್ವ ಅಭಿಮಾನಿ. ಆಕೆಯ ಬಯಕೆಯನ್ನು ತಿಳಿದುಕೊಂಡ ಸುದೀಪ್​ ಅವರು ಆಸ್ಪತ್ರೆಗೆ ತೆರಳಿ ಭೇಟಿ ಮಾಡಿದ್ದಾರೆ.

ಸಾಕ್ಷಿ ಮತ್ತು ಆಕೆಯ ಕುಟುಂಬದ ಸದಸ್ಯರನ್ನು ಕಿಚ್ಚ ಸುದೀಪ್ ಅವರು ಮಾತನಾಡಿಸಿದ್ದಾರೆ. ಬೆಂಗಳೂರಿನ ‘ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ’ದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸಾಕ್ಷಿಯ ಜೊತೆ ಸುದೀಪ್​ ಅವರು ಸಮಯ ಕಳೆದಿದ್ದಾರೆ. ಆಕೆಯ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಒಂದಷ್ಟು ಗಿಫ್ಟ್​ಗಳ ಜೊತೆಗೆ ಆಟೋಗ್ರಾಫ್​ ನೀಡಿದ್ದಾರೆ. ಇದರಿಂದ ಸಾಕ್ಷಿ ಮುಖದಲ್ಲಿ ನಗು ಮೂಡಿದೆ. ಆಕೆಯ ಬಹುದಿನಗಳ ಕನಸು ನನಸಾಗಿದೆ.

‘ಸುದೀಪ್ ಸರ್ ಎಂದರೆ ನನಗೆ ಬಹಳ ಇಷ್ಟ. ‘ರನ್ನ’ ಚಿತ್ರದ ‘ಥಿತಲಿ..’ ಹಾಡು ನನ್ನ ಫೇವರಿಟ್​’ ಎಂದಿದ್ದಾಳೆ ಸಾಕ್ಷಿ. ತನ್ನ ನೆಚ್ಚಿನ ನಟನನ್ನು ಭೇಟಿಯಾಗಿದ್ದಕ್ಕೆ ಸಾಕ್ಷಿಗೆ ತುಂಬ ಖುಷಿ ಆಗಿದೆ. ಕಿಚ್ಚ ಸುದೀಪ್​ ಅವರ ಈ ಹೃದಯವಂತಿಕೆಗೆ ಅಭಿಮಾನಿಗಳು ಹ್ಯಾಟ್ಸಾಫ್​ ಹೇಳುತ್ತಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಸಿನಿಮಾ ವಿಚಾರಕ್ಕೆ ಬರೋದಾದರೆ ಸುದೀಪ್​ ನಟನೆಯ 46ನೇ ಚಿತ್ರದ ಕೆಲಸಗಳು ಆರಂಭ ಆಗಿವೆ. ಇತ್ತೀಚೆಗೆ ಈ ಚಿತ್ರದ ಟೀಸರ್​ ಬಿಡುಗಡೆಯಾಗಿ ಗಮನ ಸೆಳೆದಿದೆ.