ಮಹಾರಾಷ್ಟ್ರದಂತೆ ರಾಜ್ಯದಲ್ಲೂ ಕ್ಷಿಪ್ರಕ್ರಾಂತಿ, ಕರ್ನಾಟಕದ ಅಜಿತ್ ಪವಾರ್​ ಕಾಯುತ್ತಿದ್ದಾನೆ: ಈಶ್ವರಪ್ಪ ಬಾಂಬ್

ಬೆಂಗಳೂರು: ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಾದ ದಿಢೀರ್​ ಬೆಳವಣಿಗೆಯಿಂದ ಎನ್​​ಸಿಪಿ ನಾಯಕ ಅಜಿತ್​ ಪವಾರ್​ ಮುಖ್ಯಮಂತ್ರಿ ಏಕನಾಥ್​​ ಶಿಂಧೆ ನೇತೃತ್ವದ ಸರ್ಕಾರದ ಜೊತೆ ಕೈಜೋಡಿಸಿ ಉಪಮುಖ್ಯಮಂತ್ರಿಯಾಗಿದ್ದಾರೆ. ಇದೀಗ ಅದೇ ತರ ಕರ್ನಾಟಕ ರಾಜ್ಯ ರಾಜಕಾರಣದಲ್ಲೂ ಆಗಲಿದೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಸುಳಿವು ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಬಿಜೆಪಿ ನಾಯಕ, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸಹ ಕುಮಾರಸ್ವಾಮಿ ಮಾತನ್ನೇ ಪುನರುಚ್ಚರಿಸಿದ್ದಾರೆ. ಇಂದು(ಜುಲೈ 04) ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವೇಳೆ ಮಾತನಾಡಿದ ಈಶ್ವರಪ್ಪ, ಮಹಾರಾಷ್ಟ್ರದಲ್ಲಿ ಕ್ಷಿಪ್ರಕ್ರಾಂತಿ ಆದಂತೆ ಕರ್ನಾಟಕದಲ್ಲೂ ಆಗಲಿದೆ. ಕರ್ನಾಟಕದ ಅಜಿತ್ ಪವಾರ್​ ಕಾಯುತ್ತಿದ್ದಾನೆ ಎಂದು ಹೊಸ ಬಾಂಬ್ ಸಿಡಿಸಿದರು.

ಮಹಾರಾಷ್ಟ್ರದಲ್ಲಿ ಆದಂಗೆ ಕರ್ನಾಟಕದಲ್ಲೂ ಆಗುತ್ತದೆ. ಕರ್ನಾಟಕದ ಅಜಿತ್ ಪವಾರ್ ಕಾಯುತ್ತಿದ್ದಾನೆ. ಅವರಿಗೆ ಈಗಿನ ಸಿಎಂ ರಾಜ್ಯದ ಜನತೆಗೆ ಮಾತ್ರವಲ್ಲ, ನನಗೂ ಮೋಸ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಸರ್ಕಾರ ಮೂರು ತಿಂಗಳು ಕೂಡ ಇರುವುದಿಲ್ಲ ಎಂದು ಪರೋಕ್ಷವಾಗಿ ಹೆಸರು ಹೇಳದೇ ಕರ್ನಾಟಕದ ಅಜಿತ್ ಪವರ್ ಡಿಕೆ ಶಿವಕುಮಾರ್​ ಎಂದರು.

ಮತಾಂತರ ನಿಷೇದ ಕಾಯ್ದೆ ಬಿಲ್ ವಾಪಸ್ ಪಡೆಯುತ್ತಿರೋ? ಗೋಹತ್ಯೆ ನಿಷೇದ ಕಾಯ್ದೆ ವಾಪಸ್ ಪಡೆಯುತ್ತೀರಾ? ಮಾಡಿ ನೋಡೊಣ. ಗೋ ಕೊಲ್ಲುವುದಕ್ಕೆ ನಿಮ್ಮ ಒಪ್ಪಿಗೆ ಇದೆಯಾ ಎಂದು ನಿಮ್ಮ ತಾಯಿ ತಂಗಿಗೆ ಹೋಗಿ ಕೇಳಿ. ಮನೆಯಲ್ಲಿ ನಿಮಗೆ ಅನ್ನ ಹಾಕಲ್ಲ. ಕೇರಳ ಸ್ಟೋರಿ ಸಿನಿಮಾ ನಾನು ಫ್ರೀ ಆಗಿ ತೋರಿಸುತ್ತೇನೆ ಬನ್ನಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.

ಮಹಾರಾಷ್ಟ್ರದಲ್ಲಿ ಎನ್​​ಸಿಪಿ ನಾಯಕ ಅಜಿತ್​ ಪವಾರ್ ಏಕಾಏಕಿ ಮುಖ್ಯಮಂತ್ರಿ ಏಕನಾಥ್​​ ಶಿಂಧೆ ನೇತೃತ್ವದ ಸರ್ಕಾರದ ಜೊತೆ ಕೈಜೋಡಿಸಿ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದರು. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಮಾತನಾಡಿ, ಬಿಜೆಪಿಯವರು ರಾಜ್ಯದಲ್ಲಿರುವುದು ಸಮ್ಮಿಶ್ರ ಸರ್ಕಾರ ಅಂತಾರೆ. ಮಹಾರಾಷ್ಟ್ರದಲ್ಲಿ ದಿಢೀರ್​ ರಾಜಕೀಯ ಬದಲಾವಣೆಯಾಗಿದೆ. ಇಲ್ಲಿ (ಕರ್ನಾಟಕ) ಯಾವ ಅಜಿತ್ ಪವಾರ್ ಹುಟ್ಟು ಹಾಕ್ತಾರೋ ಗೊತ್ತಿಲ್ಲ. ಕರ್ನಾಟಕದ ಬಗ್ಗೆಯೂ ನನಗೆ ಆತಂಕ ಶುರುವಾಗಿದೆ ಎಂದು ಹೇಳಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿತ್ತು.